ಚಿಕ್ಕೋಡಿ : ಗ್ರಾಹಕರ ವಿಶ್ವಾಸ ಹಾಗೂ ಆಡಳಿತ ಮಂಡಳಿ, ಸಿಬ್ಬಂದಿ ಪ್ರಾಮಾಣಿಕ ಸೇವೆಯಿಂದ ಅಂಕಲಿಯ ಡಾ.ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿಯು 900 ಕೋಟಿ ರೂ.ಠೇವು ಸಂಗ್ರಹಿಸಿ, 7.28 ಕೋಟಿ ರೂ.ಲಾಭ ಗಳಿಸಿದೆ ಎಂದು ರಾಜ್ಯಸಭಾ ಮಾಜಿ ಸದಸ್ಯ ಹಾಗೂ ಸಂಸ್ಥೆಯ ಸಂಸ್ಥಾಪಕ ಡಾ.ಪ್ರಭಾಕರ ಕೋರೆ ಹೇಳಿದ್ದಾರೆ.
ತಾಲೂಕಿನ ಅಂಕಲಿ ಗ್ರಾಮದ ಶಿವಾಲಯದ ಅನುಭವ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಡಾ.ಪ್ರಭಾಕರ ಕೋರೆ ಸೌಹಾರ್ದ ಸಹಕಾರಿ 32ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಸಹಕಾರಿಯು 14,715 ಸದಸ್ಯರನ್ನು ಒಳಗೊಂಡು 2.30 ಕೋಟಿ ರೂ.ಷೇರು ಬಂಡವಾಳ, 671.62 ಕೋಟಿ ರೂ.ಸಾಲ ವಿತರಿಸಿದ್ದು, 7,794 ಕೋಟಿ ರೂ.ವಾರ್ಷಿಕ ವಹಿವಾಟು ಹೊಂದಿದೆ. ರಾಜ್ಯಾದ್ಯಂತ ಈಗಾಗಲೇ 40 ಶಾಖೆ ಪ್ರಾರಂಭಿಸಿದೆ. 300ಕ್ಕೂ ಹೆಚ್ಚಿನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಮುಂಬರುವ ಆರ್ಥಿಕ ವರ್ಷದ ವೇಳೆಗೆ 1000 ಸಾವಿರ ಕೋಟಿ ರೂ.ಠೇವು ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಚಿಕ್ಕೋಡಿ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಅಮಿತ್ ಪ್ರಭಾಕರ ಕೋರೆ ಮಾತನಾಡಿ, ಕೋವಿಡ್-19 ಇಕ್ಕಟ್ಟಿನ ಮಧ್ಯೆಯೇ ಡಾ.ಪ್ರಭಾಕರ ಕೋರೆ ಸೌಹಾರ್ದ ಸಹಕಾರಿ ಪ್ರಗತಿ ಸಾಧಿಸಿದೆ. ಅದಕ್ಕೆ ಸಿಬ್ಬಂದಿಯ ಪ್ರಾಮಾಣಿಕ ಸೇವೆ ಕಾರಣ ಎಂದರು. ಸಹಕಾರಿ ಅಧ್ಯಕ್ಷ ಮಹಾಂತೇಶ ಪಾಟೀಲ ಅಧ್ಯಕ್ಷತೆ ವಹಿಸಿ ವಾರ್ಷಿಕ ವರದಿ ಮಂಡಿಸಿದರು. ಸದಸ್ಯರು ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಹಕಾರಿಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಾಧನೆ ಮಾಡಿದ ಶಾಖೆಗಳಿಗೆ ಬಹುಮಾನ ಹಾಗೂ ಮರಣ ಹೊಂದಿದ ಸದಸ್ಯರ ವಾರಸುದಾರರಿಗೆ ವಿಮೆ ಚೆಕ್ ವಿತರಿಸಲಾಯಿತು.
ಉಪಾಧ್ಯಕ್ಷೆ ಶೋಭಾ ಜಕಾತೆ, ಸಿದಗೌಡ ಮಗದುಮ್ಮ, ಅಣ್ಣಾಸಾಹೇಬ ಸಂಕೇಶ್ವರಿ, ಪಿಂಟು ಹಿರೇಕುರುಬರ, ಮಹಾದೇವ ಪೋಳ,
ಶೈಲಜಾ ಪಾಟೀಲ, ಕಾಡಪ್ಪ ಸಂಗೋಟಿ, ನೆಹರು ಚಿಕಲಿ, ಜ್ಯೋತಿಗೌಡ ಪಾಟೀಲ, ಲೆಕ್ಕ ಪರಿಶೋಧಕ ರವಿ ಕರ್ಹಾಡಕರ ಇತರರು ಉಪಸ್ಥಿತರಿದ್ದರು. ಪ್ರಧಾನ ವ್ಯವಸ್ಥಾಪಕ ದೇವೇಂದ್ರ ಕರೋಶಿ ಸ್ವಾಗತಿಸಿ, ವಾರ್ಷಿಕ ವರದಿಗೆ ಅನುಮೋದನೆ ಪಡೆದರು. ಸುನಂದಾ ಮಗದುಮ್ಮ ನಿರೂಪಿಸಿದರು. ಶಾಖೆಯ ನಿರ್ದೇಶಕ ಬಸನಗೌಡ ಆಸಂಗಿ ವಂದಿಸಿದರು.