ನವದೆಹಲಿ: ಭಾರತದಲ್ಲಿ ಅತಿಯಾಗಿ ಕರೊನಾ ಬಾಧಿಸಿದ ಪ್ರದೇಶಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯೂ ಒಂದು. ಮಹಾರಾಷ್ಟ್ರ ಬಿಟ್ಟರೆ ದೆಹಲಿ ಎರಡನೇ ಸ್ಥಾನದಲ್ಲಿದೆ.
ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆ ಸೇರಿ ಹಲವು ವಿಧದ ತೊಂದರೆಗಳೂ ಅಲ್ಲಿ ಸೃಷ್ಟಿಯಾಗಿದ್ದವು. ತನ್ಮಧ್ಯ ಗೃಹ ಸಚಿವ ಅಮಿತ್ ಷಾ ಅವರೇ ಸ್ವತಃ ದೆಹಲಿ ಬಗ್ಗೆ ಕಾಳಜಿ ವಹಿಸಿದ್ದು, ಅಲ್ಲಿ ಸೋಂಕು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸರ್ಕಾರಕ್ಕೆ ಸೂಚಿಸಿದ್ದಾರೆ.
ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವರ್ಚ್ಯುವಲ್ ಸುದ್ದಿಗೋಷ್ಠಿ ನಡೆಸಿ, ರಾಷ್ಟ್ರರಾಜಧಾನಿಯ ಕೊವಿಡ್-19 ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾರೆ. ನಾವು ಕರೊನಾ ಸೋಂಕಿನ ವಿರುದ್ಧ ಐದು ಅಸ್ತ್ರವನ್ನು ಪ್ರಯೋಗಿಸುತ್ತಿದ್ದೇವೆ. ಇದರಿಂದಾಗಿ ವೈರಸ್ ಪ್ರಸರಣದ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.
ಮೊದಲನೇದಾಗಿ ಆಸ್ಪತ್ರೆಗಳಲ್ಲಿ ಬೆಡ್ಗಳನ್ನು ಹೆಚ್ಚಿಸಿದ್ದೇವೆ. ಎರಡನೇ ಅಸ್ತ್ರವನ್ನಾಗಿ ಕೊವಿಡ್-19 ತಪಾಸಣೆ ಮತ್ತು ಐಸೋಲೇಶನ್ನ್ನು ತ್ವರಿತಗತಿಯಲ್ಲಿ ಮಾಡಲಾಗುತ್ತಿದೆ. ಮೂರನೇದಾಗಿ ಪಲ್ಸ್ ಆಕ್ಸಿಮೀಟರ್ ಮತ್ತು ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ಹೆಚ್ಚಿಸಲಾಗಿದೆ. ನಾಲ್ಕನೇದಾಗಿ ಪ್ಲಾಸ್ಮಾ ಥೆರಪಿಯನ್ನು ಅಳವಡಿಸಿಕೊಳ್ಳಲಾಗಿದೆ ಹಾಗೂ ಕೊನೇಯ ಮತ್ತು ಐದನೇ ಅಸ್ತ್ರವೆಂದರೆ ಸಮೀಕ್ಷೆ, ಸ್ಕ್ರೀನಿಂಗ್ಗಳು. ಇವೆಲ್ಲವುಗಳಿಂದಾಗಿ ಕರೊನಾ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಮಾಡಲಾಗುತ್ತಿದೆ ಎಂದಿದ್ದಾರೆ.
ಲಾಕ್ಡೌನ್ ತೆರವಿನ ಬಳಿಕ ಕರೊನಾ ಹೆಚ್ಚುತ್ತದೆ ಎಂಬುದು ಅಂದಾಜಿತ್ತು. ಆದರೆ ನಮ್ಮ ಕಲ್ಪನೆಗೂ ಮೀರಿ ಸೋಂಕಿನ ಪ್ರಮಾಣ ಹೆಚ್ಚಾಯಿತು. ನಮ್ಮ ಎದುರು ಇದ್ದಿದ್ದು ಎರಡೇ ಆಯ್ಕೆ. ಒಂದು ಮತ್ತೊಮ್ಮೆ ಲಾಕ್ಡೌನ್ ಹೇರುವುದು, ಇನ್ನೊಂದು ಕರೊನಾ ವಿರುದ್ಧ ಹೋರಾಡುವುದು. ಇವೆರಡಲ್ಲಿ ಹೆಚ್ಚಿನ ಜನರ ಅಭಿಪ್ರಾಯ ಲಾಕ್ಡೌನ್ ಬೇಡ ಎಂಬುದಾಗಿತ್ತು. ಹಾಗಾಗಿ ಕರೊನಾ ವಿರುದ್ಧ ದಿಟ್ಟವಾಗಿ ಹೋರಾಡುತ್ತಿದ್ದೇವೆ ಎಂದು ತಿಳಿಸಿದರು.
ಮೊದಮೊದಲು ಆಸ್ಪತ್ರೆಗಳಲ್ಲಿ ಬೆಡ್ಗಳ ಸಮಸ್ಯೆ ಉಂಟಾಯಿತು. ಇದರಿಂದಾಗಿ ಸಾವಿನ ಸಂಖ್ಯೆಯಲ್ಲೂ ಏರಿಕೆಯಾಯಿತು. ಕಳೆದ ಒಂದು ವಾರದಿಂದ ಬೆಡ್ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಸದ್ಯ ದೆಹಲಿಯಲ್ಲಿ 13, 500 ಬೆಡ್ಗಳಿವೆ. ಅದರಲ್ಲಿ 6500 ತುಂಬಿವೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಜೂನ್ ಮೊದಲ ವಾರದಲ್ಲಿ ದಿನಕ್ಕೆ 5000 ಮಂದಿಯನ್ನು ಕರೊನಾ ಟೆಸ್ಟ್ಗೆ ಒಳಪಡಿಸಲಾಗುತ್ತಿತ್ತು. ಆದರೆ ಈಗ ಪ್ರತಿದಿನ 20,000 ಮಂದಿಗೆ ತಪಾಸಣೆ ಮಾಡುತ್ತಿದ್ದೇವೆ.
ಈ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ನಮಗೆ ತುಂಬ ಸಹಕಾರ ನೀಡಿದೆ. ಆ್ಯಂಟಿಜನ್ ಕಿಟ್ ಬಳಸಲು ಕೇಂದ್ರ ಸರ್ಕಾರ ಮೊದಲು ನಮಗೆ ಅವಕಾಶ ನೀಡಿದೆ. ಇದೀಗ ನಾವು 6 ಲಕ್ಷಕ್ಕೂ ಅಧಿಕ ಕಿಟ್ಗಳಿಗೆ ಆರ್ಡ್ ಮಾಡಿದ್ದೇವೆ ಎಂದಿದ್ದಾರೆ. (ಏಜೆನ್ಸೀಸ್)
ಗ್ಯಾಸ್ ಸ್ಪೋಟದಿಂದ ಇಡೀ ಮನೆ ಧ್ವಂಸವಾದ್ರೂ ತಾಯಿ-ಮಕ್ಕಳ ಜೀವ ಉಳಿಸಿದ ಫ್ರಿಡ್ಜ್!