More

    ಮತದಾರರ ಆಕರ್ಷಣೆಗೆ 1832 ವಿಶೇಷ ಮತಗಟ್ಟೆ ಸ್ಥಾಪನೆ

    ಬೆಂಗಳೂರು: ರಾಜ್ಯದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ 5.47 ಕೋಟಿ ಮತದಾರರಿದ್ದು, ಮತದಾನಕ್ಕಾಗಿ 58,834 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 1832 ವಿವಿಧ ವಿಷಯವಾರು ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ಕುಮಾರ್ ಮೀನಾ ತಿಳಿಸಿದ್ದಾರೆ.

    ಈ ಚುನಾವಣೆಗಾಗಿ ‘ಚುನಾವಣಾ ಪರ್ವ ದೇಶದ ಗರ್ವ’ ಎನ್ನುವ ಘೋಷ ವಾಕ್ಯವನ್ನು ಅಳವಡಿಸಕೊಳ್ಳಲಾಗಿದ್ದು, ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಎಲ್ಲರನ್ನೂ ಒಳಗೊಳ್ಳುವ, ಸುಗಮ, ನೈತಿಕ, ಭಾಗವಹಿಸುವಿಕೆಯ ಜತೆಗೆ ಮಾಹಿತಿಯುಕ್ತ ಚುನಾವಣೆಯನ್ನು ರಾಜ್ಯದಾದಂತ್ಯ ಪ್ರಜಾಪ್ರಭುತ್ವದ ಹಬ್ಬದ ರೀತಿ ಆಚರಿಸಲಾಗುವುದು ಎಂದು ಹೇಳಿದರು.

    ಮತದಾರರ ಶಿಕ್ಷಣ ಮತ್ತು ಮತದಾರರ ಭಾಗವಹಿಸುವಿಕೆ ಅಡಿಯಲ್ಲಿ ಎಲ್ಲ ಮತದಾರರಲ್ಲಿ ಮತದಾನದ ಕುರಿತು ಅರಿವು ಮತ್ತು ಜಾಗೃತಿ ಮೂಡಿಸಲಾಗಿದೆ. ಮುಖ್ಯವಾಗಿ ಮಹಿಳಾ ಮತದಾರರು, ಯುವ ಮತದಾರರು, ವಿಶೇಷ ಚೇತನರು, ಆದಿವಾಸಿ ಮತದಾರರನ್ನು ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಮುಖಾಂತರ ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

    ಮಹಿಳಾ ಮತದಾರರನ್ನು ಮತದಾನದಲ್ಲಿ ಭಾಗವಹಿಸುವಂತೆ ಉತ್ತೇಜಿಸುವ ಸಲುವಾಗಿ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಟ 05 ಸಖಿ ಮತಗಟ್ಟೆಗಳನ್ನು ರಾಜ್ಯಾದ್ಯಂತ ಒಟ್ಟು 1120 ಮತಗಟ್ಟೆಗಳನ್ನು ಮಹಿಳೆಯರಿಂದಲೇ ನಿರ್ವಹಿಸಲಾಗುತ್ತದೆ. ಈ ಮತಗಟ್ಟೆಗಲ್ಲಿ ಆರಕ್ಷಕ ಸಿಬ್ಬಂದಿ, ಗ್ರೂಪ್ ಡಿ ನೌಕರರು ಹಾಗೂ ಎಲ್ಲಾ ಮತಗಟ್ಟೆಯ ಅಧಿಕಾರಿಗಳು ಮಹಿಳೆಯರೇ ಆಗಿರುತ್ತಾರೆ.

    ವಿಶೇಷ ಚೇತನ ಮತದಾರರಲ್ಲಿ ಚುನಾವಣೆ ಮತ್ತು ಮತದಾನದ ಬಗ್ಗೆ ಆಸಕ್ತಿ ಮೂಡಿಸಲು ಹಾಗೂ ಭಾಗವಹಿಸುವಂತೆ ಪ್ರೇರೇಪಿಸಲು ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಟ 1 ವಿಶೇಷ ಚೇತನ ಮತಗಟ್ಟೆ, ಯುವ ಮತದಾರರಲ್ಲಿ ಚುನಾವಣೆ ಮತ್ತು ಮತದಾನದ ಬಗ್ಗೆ ಆಸಕ್ತಿ ಮೂಡಿಸಲು ಹಾಗೂ ಭಾಗವಹಿಸುವಂತೆ ಪ್ರೇರೇಪಿಸಲು ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಟ 1 ಯುವ ಮತಗಟ್ಟೆ, ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಟ 1 ಧ್ಯೇಯ ಆಧಾರಿತ ಮತಗಟ್ಟೆಯನ್ನು ಆಯಾ ಜಿಲ್ಲೆಗಳ ವಿಶೇಷತೆ, ಪ್ರಾದೇಶಿಕ ಸಾಂಸ್ಕೃತಿಕ ಸೊಗಡಿನ ಹಿನ್ನೆಲೆಯಲ್ಲಿ, ಪಾರಂಪರಿಕ ಕುಶಲ ಕಲೆಗಳು, ವಿನೂತನ ಪ್ರಯೋಗಗಳು, ಜಾಗತಿಕ ಸಂದೇಶ ಸಾರುವಂತಹ ಮಾದರಿಯಲ್ಲಿ ರಚಿಸಲು ನಿರ್ದೇಶಿಸಲಾಗಿದೆ.

    ಆದಿವಾಸಿಗಳ ಮತಗಟ್ಟೆಗಳನ್ನು ಕಾಡಿನ ಅಂಚಿನಲ್ಲಿರುವ ಅಥವಾ ಕಾಡಿನಲ್ಲಿ ಜೀವಿಸುವ ಆದಿವಾಸಿ ಜನರಿಂದ ಪರಿಶಿಷ್ಟ ವರ್ಗಗಳ ಇಲಾಖೆ ವತಿಯಿಂದ ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಒಟ್ಟು 40 ಮತಗಟ್ಟೆಗಳನ್ನು ಸಾಂಪ್ರದಾಯಿಕ ಬುಡಕಟ್ಟು ಜನರ ಸಾಂಸ್ಕೃತಿಕ ಹಿನ್ನೆಲೆ ಬಿಂಬಿಸುವ ರೀತಿಯಲ್ಲಿ ಅಲಂಕರಿಸುವ ಮೂಲಕ ಆದಿವಾಸಿ ಮತದಾರರನ್ನು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಆಕರ್ಷಿತರನ್ನಾಗಿ ಮಾಡಲು ಈ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಮನೋಜ್‌ಕುಮಾರ್ ಮೀನಾ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts