ಭೋಪಾಲ್: ಮಧ್ಯಪ್ರದೇಶ ಸರ್ಕಾರದ ಬಿಕ್ಕಟ್ಟು ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಸಿಎಂ ಕಮಲ್ನಾಥ್ ವಿರುದ್ಧ ಮುನಿಸಿಕೊಂಡು ಬಂಡಾಯವೆದ್ದಿದ್ದ ಕಾಂಗ್ರೆಸ್ನ 17 ಶಾಸಕರು ಬೆಂಗಳೂರು ಸೇರಿಕೊಂಡ ಬೆನ್ನಲ್ಲೇ ಅವರ ಮನವೊಲಿಕೆಗಾಗಿ ಕಮಲ್ ಸಂಪುಟದ 16 ಸಚಿವರು ಸೋಮವಾರ ತಡರಾತ್ರಿಯ ಬೆಳವಣಿಗೆಯಲ್ಲಿ ರಾಜೀನಾಮೆ ನೀಡಿದ್ದಾರೆ.
ಅತೃಪ್ತರಿಗೆ ಸಚಿವ ಸ್ಥಾನ ನೀಡಿ ಬಿಕ್ಕಟ್ಟು ಪರಿಹರಿಸುವುದು ಕೈ ನಾಯಕರ ತಂತ್ರವಾಗಿದೆ. ಮತ್ತೊಂದೆಡೆ ಅತೃಪ್ತರು ಕೈಗೆ ಸಿಗದಿದ್ದಲ್ಲಿ ಬಿಜೆಪಿ ಶಾಸಕರನ್ನೇ ಸೆಳೆದು ಸರ್ಕಾರ ಉಳಿಸಿಕೊಳ್ಳುವ ಯತ್ನವೂ ನಡೆದಿರುವುದಾಗಿ ತಿಳಿದು ಬಂದಿದೆ.
ಸರ್ಕಾರ ಉಳಿಸಲು ಶತ ಪ್ರಯತ್ನ ನಡೆಸುತ್ತಿರುವ ಮುಖ್ಯಮಂತ್ರಿ ಕಮಲ್ನಾಥ್ ಸೋಮವಾರ ತಡರಾತ್ರಿ ತುರ್ತಾಗಿ ಸಚಿವ ಸಂಪುಟ ಸಭೆ ನಡೆಸಿದರು. ಈ ವೇಳೆ ಸಭೆಗೆ ಹಾಜರಾಗಿದ್ದ 16 ಸಚಿವರು ಸಿಎಂ ಸೂಚನೆ ಮೇರೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಎಲ್ಲರ ರಾಜೀನಾಮೆಗಳನ್ನೂ ಅಂಗೀಕರಿಸಲಾಗಿದೆ.
ಸರ್ಕಾರದ ವಿರುದ್ಧ ದಂಗೆ ಎದ್ದಿರುವ ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡುವ ಮೂಲಕ ತಮ್ಮ ಸಿಎಂ ಖುರ್ಚಿ ಭದ್ರಪಡಿಸಿಕೊಳ್ಳಲು ಕಮಲ್ನಾಥ್ ಯೋಚಿಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಹೀಗಾಗಿ ಶೀಘ್ರದಲ್ಲೇ ಸಚಿವ ಸಂಪುಟ ಪುನಾರಚನೆಯಾಗುವ ಸಾಧ್ಯತೆ ಇದೆ. ಸಂಪುಟ ಸಭೆ ಬಳಿಕ ಮಾತನಾಡಿದ ಕಮಲ್ನಾಥ್, ‘ಮಾಫಿಯಾ ಸಹಾಯದಿಂದ ಸರ್ಕಾರದಲ್ಲಿ ಅಸ್ಥಿರತೆ ಉಂಟುಮಾಡಲು ಯತ್ನಿಸುತ್ತಿರುವವರಿಗೆ ನಾನು ಅವಕಾಶ ನೀಡುವುದಿಲ್ಲ.
ಧ್ಯಪ್ರದೇಶ ಜನರ ಪ್ರೀತಿ ಮತ್ತು ನಂಬಿಕೆ ನನ್ನ ದೊಡ್ಡ ಶಕ್ತಿ. ಈ ಸರ್ಕಾರ ಜನರಿಂದ ರಚನೆಯಾಗಿರುವುದು, ಇದನ್ನು ಅಸ್ಥಿರಗೊಳಿಸಲು ಬಿಡುವುದಿಲ್ಲ’ ಎಂದಿದ್ದಾರೆ. ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಡರಾತ್ರಿ ದೆಹಲಿಯ 10 ಜನಪತ್ನಲ್ಲಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿವಾಸಕ್ಕೆ ತೆರಳಿ, ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದರು.