ಭದ್ರಾವತಿ: ತಾಲೂಕಿನ ಕೊಮಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರಹಳ್ಳಿ ಕೆರೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪುನಶ್ಚೇತನಗೊಳಿಸಲು ನಮ್ಮೂರು ನಮ್ಮ ಕೆರೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
13 ಎಕರೆ ವಿಸ್ತೀರ್ಣದ ಈ ಕೆರೆಯನ್ನು 16 ಲಕ್ಷ ರೂ. ಅನುದಾನದಲ್ಲಿ ಪುನಶ್ಚೇತಗೊಳಿಸಲು ಉದ್ದೇಶಿಸಲಾಗಿದ್ದು ಶ್ರೀ ಕ್ಷೇತ್ರದಿಂದ ಬರುವ ಅನುದಾನವನ್ನು ಸರಿಯಾಗಿ ಬಳಕೆ ಮಾಡಿಕೊಂಡು ಪುಣ್ಯದ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಯೋಜನೆಯ ಜಿಲ್ಲಾ ನಿರ್ದೇಶಕ ಚಂದ್ರಶೇಖರ್ ಹೇಳಿದರು.
ಕೆರೆಯಲ್ಲಿ 12 ಎಕರೆಯಷ್ಟು ಹೂಳು ತುಂಬಿಕೊಂಡಿದ್ದು ಆ ಹೂಳನ್ನು ತೆಗೆದು ರೈತರ ಜಮೀನುಗಳಿಗೆ ನೀಡಲಾಗುವುದು. ಕೆರೆಯ ನಿರ್ವಹಣೆಗೆ ಸಮಿತಿ ರಚನೆ ಮಾಡಲಾಗುವುದು. ಹೂಳು ತೆಗೆಸಿ ಅಚ್ಚುಕಟ್ಟು ಮಾಡುವುದರಿಂದ 200 ಎಕರೆ ಕೃಷಿ ಜಮೀನಿಗೆ ಅನುಕೂಲವಾಗಲಿದೆ. ಜತೆಗೆ ಅಂತರ್ಜಲ ವೃದ್ಧಿಯಾಗಿ ಜಾನುವಾರುಗಳು ಸೇರಿದಂತೆ ಜೀವ ಸಂಕುಲಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ರಾಜ್ಯಾದ್ಯಂತ ಕೆರೆಗಳ ಪುನಶ್ಚೇತನಕ್ಕೆ ಶ್ರೀ ವೀರೇಂದ್ರ ಹೆಗ್ಗಡೆ ಅವರು ಮುಂದಾಗಿದ್ದು ಶ್ರೀ ಕ್ಷೇತ್ರದ ಯೋಜನೆಗಳಿಂದ ಸಂಗ್ರಹವಾಗುವ ಹಣವನ್ನು ರೈತರ ಶ್ರೇಯೋಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದೆ. ದೇವರಹಳ್ಳಿ ಕೆರೆ ಅಭಿವೃದ್ಧಿ 491ನೇ ಕೆರೆಯಾಗಿದ್ದು ಕೆರೆಯ ಸುತ್ತ ನಡಿಗೆ ದಾರಿ, ಉದ್ಯಾನ ಹಾಗೂ ಈಜುಕೊಳ ನಿರ್ಮಾಣ ಕೂಡ ಮಾಡಲಾಗುವುದು. ನಾವು ಮಾಡುವ ಕೆಲಸ ಮುಂದಿನ ಪೀಳಿಗೆಗೆ ಅನುಕೂಲವಾಗುವ ದೃಷ್ಟಿಯಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಸಂಸ್ಥೆಯಿಂದ ನಡೆಸಲಾಗುತ್ತಿದೆ ಎಂದರು.