More

    ಹಾವೇರಿ ನಗರಸಭೆ ಗದ್ದುಗೆಗೆ ಪೈಪೋಟಿ

    ಹಾವೇರಿ: ನಗರಸಭೆ ಸದಸ್ಯತ್ವಕ್ಕೆ ಆಯ್ಕೆ ನಡೆದು ಬರೋಬ್ಬರಿ 25 ತಿಂಗಳಾದ ನಂತರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿದೆ. ದೀರ್ಘ ಕಾಲ ಅಧಿಕಾರಕ್ಕಾಗಿ ಕಾದಿರುವ ಸದಸ್ಯರು ಈಗ ಗದ್ದುಗೆಗಾಗಿ ಪೈಪೋಟಿಗೆ ಇಳಿದಿದ್ದಾರೆ.

    31 ಸದಸ್ಯ ಬಲ ಇರುವ ಹಾವೇರಿ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಸ್ಥಳೀಯ ಶಾಸಕರು, ಸಂಸದರ ಮತವೂ ಲೆಕ್ಕಕ್ಕೆ ಬರಲಿದೆ. ಹೀಗಾಗಿ, ಚುನಾವಣೆಯಲ್ಲಿ ಮತ ಚಲಾಯಿಸುವ ಒಟ್ಟು ಸದಸ್ಯರ ಸಂಖ್ಯೆ 33ಕ್ಕೇರಲಿದೆ. ಬಹುಮತಕ್ಕೆ 17 ಸದಸ್ಯರ ಮ್ಯಾಜಿಕ್ ಸಂಖ್ಯೆ ಅಗತ್ಯ. ಕಾಂಗ್ರೆಸ್​ನ 15, ಬಿಜೆಪಿಯ 9 ಸದಸ್ಯರು ಹಾಗೂ 7 ಪಕ್ಷೇತರರು ಆಯ್ಕೆಯಾಗಿದ್ದಾರೆ. ರಾಜ್ಯ ಸರ್ಕಾರ ಪ್ರಕಟಿಸಿದ ಮೀಸಲಾತಿ ಪಟ್ಟಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ಮಹಿಳೆಗೆ ಮೀಸಲಾಗಿದೆ.

    ಗದ್ದುಗೆ ಸಮೀಪ ಕಾಂಗ್ರೆಸ್: ಕಾಂಗ್ರೆಸ್ ಪಕ್ಷವು ಬಹುಮತದ ಸಮೀಪದಲ್ಲಿದೆ. ಬಹುಮತ ಗಳಿಸಲು ಕನಿಷ್ಠ ಇಬ್ಬರು ಪಕ್ಷೇತರರ ಬೆಂಬಲವನ್ನು ಆ ಪಕ್ಷ ಪಡೆಯಬೇಕಾಗಿದೆ. 7 ಪಕ್ಷೇತರ ಸದಸ್ಯರಲ್ಲಿ ಈಗಾಗಲೇ ಒಬ್ಬರನ್ನು ಕಾಂಗ್ರೆಸ್ ಸೆಳೆದುಕೊಂಡಿದೆ. ಇನ್ನೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯವನ್ನು ಚುರುಕುಗೊಳಿಸಿದೆ.

    ಕಮಲಕ್ಕೂ ಇದೇ ಚಾನ್ಸ್: ಸ್ಥಳೀಯ ಶಾಸಕರು, ಸಂಸದರು ಬಿಜೆಪಿಯವರೇ ಇರುವುದರಿಂದ ಬಿಜೆಪಿ ಸಂಖ್ಯಾಬಲ 11ಕ್ಕೇರಲಿದೆ. ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿಗೆ 6 ಪಕ್ಷೇತರ ಸದಸ್ಯರ ಬೆಂಬಲ ಅನಿವಾರ್ಯ. ಆದರೆ, ಇಷ್ಟು ಸದಸ್ಯರನ್ನು ಸೆಳೆಯುವುದು ಕಷ್ಟದ ಕೆಲಸವೇ ಸರಿ. ಆದರೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ನಗರಸಭೆ ಗದ್ದುಗೆಗೇರಲು ಅನುಕೂಲಕರ ಆಗಿದೆ. ಪಕ್ಷೇತರರಲ್ಲಿ ಈಗಾಗಲೇ ಇಬ್ಬರು ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ. ಇನ್ನುಳಿದ ನಾಲ್ವರ ಮನವೊಲಿಸಲು ಆಕಾಂಕ್ಷಿ ಅಭ್ಯರ್ಥಿಗಳು ಹರಸಾಹಸ ಮಾಡುತ್ತಿದ್ದಾರೆ.

    ಸಂಜೀವಕುಮಾರಗೆ ಒಲಿಯುವುದೇ ಅದೃಷ್ಟ: ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಕಾಂಗ್ರೆಸ್​ನಿಂದ ಹಿಂದಿನ ಅವಧಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿದ್ದ ಸಂಜೀವಕುಮಾರ ನೀರಲಗಿ ಹಾಗೂ ಮಾಜಿ ಸಚಿವ ಬಸವರಾಜ ಶಿವಣ್ಣನವರ ಪುತ್ರ ನಿಂಗರಾಜ ಶಿವಣ್ಣನವರ ಆಕಾಂಕ್ಷಿಗಳಾಗಿದ್ದಾರೆ. ಸಂಜೀವಕುಮಾರ ನೀರಲಗಿ ಅವರು ಸತತ 2ನೇ ಬಾರಿಗೆ ನಗರಸಭೆಗೆ ಆಯ್ಕೆಯಾಗಿದ್ದಾರೆ. ಹಿಂದಿನ ಅವಧಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಸ್ವಭಾವದವರಾಗಿದ್ದಾರೆ. ಮಾಜಿ ಸಚಿವರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ ಆಪ್ತರಾಗಿದ್ದಾರೆ. ನಿಂಗರಾಜ ಶಿವಣ್ಣನವರ ಇದೇ ಮೊದಲ ಬಾರಿಗೆ ನಗರಸಭೆಗೆ ಆಯ್ಕೆಯಾಗಿರುವುದರಿಂದ ಅತಂತ್ರ ನಗರಸಭೆಯಲ್ಲಿ ಅವರನ್ನು ಗದ್ದುಗೆಗೇರಿಸುವುದು ಅಷ್ಟು ಸುಲಭವಾಗಿಲ್ಲ. ಹೀಗಾಗಿ, ಕೈ ಪಾಳಯ ಸಂಜೀವಕುಮಾರ ನೀರಲಗಿ ಅವರನ್ನು ಅಭ್ಯರ್ಥಿಯನ್ನಾಗಿಸಿದರೆ ಪಕ್ಷೇತರರು ಬೆಂಬಲ ಸೂಚಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

    ಬೆಳವಡಿ ಬಸಣ್ಣನಿಂದಲೂ ಪೈಪೋಟಿ: 20ನೇ ವಾರ್ಡ್​ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಬಸವರಾಜ (ಬಸಣ್ಣ) ಬೆಳವಡಿ ಬಿಜೆಪಿ ಜತೆ ಕೈ ಜೋಡಿಸಿದ್ದು, ಅವರನ್ನು ಅಧ್ಯಕ್ಷ ಸ್ಥಾನಕ್ಕೇರಿಸಲು ಬಿಜೆಪಿ ಉತ್ಸುಕತೆ ತೋರಿದೆ. ಬಿಜೆಪಿ ಟಿಕೆಟ್ ಸಿಗದೆ ಬಸವರಾಜ ಬೆಳವಡಿಯೊಂದಿಗೆ ಕೆಲವರು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಅವರಲ್ಲಿ ಒಂದಿಬ್ಬರು ಬಸಣ್ಣ ಅಧ್ಯಕ್ಷರಾದರೆ ನಾವು ಬೆಂಬಲಿಸುತ್ತೇವೆ ಎಂಬ ಮೌಖಿಕ ಸಂದೇಶವನ್ನು ಬಿಜೆಪಿ ವರಿಷ್ಠರಿಗೆ ರವಾನಿಸಿದ್ದಾರೆ. ಹೀಗಾಗಿ, ಬಸಣ್ಣ ಅಖಾಡಕ್ಕಿಳಿದರೆ ಬಹುಮತ ಗಳಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

    ಉಪಾಧ್ಯಕ್ಷೆ ಸ್ಥಾನ ಯಾರಿಗೆ?: ಉಪಾಧ್ಯಕ್ಷೆ ಸ್ಥಾನ ಹಿಂದುಳಿದ ಅ ವರ್ಗ ಮಹಿಳೆಗೆ ಮೀಸಲಾಗಿದೆ. ನಗರಸಭೆ 31 ವಾರ್ಡ್​ಗಳಲ್ಲಿ 15, 25, 26ನೇ ವಾರ್ಡ್​ಗಳು ಹಿಂದುಳಿದ ಅ ವರ್ಗ ಮಹಿಳೆಗೆ ಮೀಸಲಾಗಿದ್ದವು. ಈ ಮೂರು ವಾರ್ಡ್​ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿಗಳು ಸೋಲುಂಡಿದ್ದಾರೆ. ಹೀಗಾಗಿ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್​ನಲ್ಲಿ ಅಷ್ಟೊಂದು ಪೈಪೋಟಿಯಿಲ್ಲ. ಆದರೆ, ಸಾಮಾನ್ಯ ಮಹಿಳಾ ಸ್ಥಾನದಲ್ಲಿ ಗೆದ್ದು ಅ ವರ್ಗದ ಮೀಸಲಾತಿ ಹೊಂದಿರುವ ಸದಸ್ಯರಿದ್ದಾರೆ. ಅವರು ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುವುದು ನಿಶ್ಚಿತವಾಗಿದೆ.

    ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಈಗಾಗಲೇ ಒಮ್ಮೆ ಸದಸ್ಯನಾಗಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಈ ಅನುಭವದ ಆಧಾರದಲ್ಲಿ ಪಕ್ಷದ ಹಿರಿಯರು ಅವಕಾಶ ಕೊಡುವ ನಿರೀಕ್ಷೆಯಿದೆ. ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ.

    | ಸಂಜೀವಕುಮಾರ ನೀರಲಗಿ, ಕಾಂಗ್ರೆಸ್ ಆಕಾಂಕ್ಷಿ ಅಭ್ಯರ್ಥಿ

    ಬಿಜೆಪಿಯಿಂದ ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ವರಿಷ್ಠರಲ್ಲಿಯೂ ಮನವಿ ಮಾಡಿದ್ದೇನೆ. ಪಕ್ಷ ಅಧಿಕಾರಕ್ಕೇರಲು ಪಕ್ಷೇತರರ ಬೆಂಬಲ ಅವಶ್ಯವಿದೆ. ಈಗಾಗಲೇ ಪಕ್ಷೇತರ ಸದಸ್ಯರೊಂದಿಗೂ ರ್ಚಚಿಸಿದ್ದು, ಬೆಂಬಲಿಸುವ ಭರವಸೆ ನೀಡಿದ್ದಾರೆ. ಪಕ್ಷದ ನಾಯಕರು ಯಾವ ನಿರ್ಧಾರ ಕೈಗೊಳ್ಳುತ್ತಾರೋ ಅದರಂತೆ ನಡೆದುಕೊಳ್ಳುತ್ತೇನೆ.

    | ಬಸವರಾಜ ಬೆಳವಡಿ, ಬಿಜೆಪಿ ಆಕಾಂಕ್ಷಿ ಅಭ್ಯರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts