ಹಳಿಯಾಳ: ಸ್ಥಳೀಯ ಪೌರ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಕಾರಣದಿಂದ ಮಂಗಳವಾರ ನಡೆಯಬೇಕಾಗಿದ್ದ ಹಳಿಯಾಳ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಚುನಾವಣೆಯನ್ನು ಸ್ಥಗಿತಗೊಳಿಸಲಾಯಿತು. ಇದರಿಂದ ಆಕಾಂಕ್ಷಿತ ಸದಸ್ಯರಿಗೆ ತೀವ್ರ ನಿರಾಶೆ ಉಂಟು ಮಾಡಿತು.
ಕಾಂಗ್ರೆಸ್ ಸಭೆ: ಮಂಗಳವಾರ ಬೆಳಗ್ಗೆ ಇಲ್ಲಿಯ ಖಾಸಗಿ ಹೋಟೆಲ್ ಒಂದರಲ್ಲಿ ಪುರಸಭೆಯ ಕಾಂಗ್ರೆಸ್ ಸದಸ್ಯರ ಸಭೆ ನಡೆಯಿತು. ಸಭೆಯಲ್ಲಿ ಶಾಸಕ ಆರ್.ವಿ.ದೇಶಪಾಂಡೆ ಅವರು, ‘ಪಕ್ಷ ಸಂಘಟನೆ, ಸದಸ್ಯರ ಕರ್ತವ್ಯ ಜವಾಬ್ದಾರಿ’ ಕುರಿತು ಮಾತನಾಡಿದರು. ಈ ವೇಳೆ ವಿ.ಪ. ಸದಸ್ಯ ಎಸ್.ಎಲ್. ಘೊಟ್ನೇಕರ, ಪಕ್ಷದ ಪ್ರಮುಖರು ಇದ್ದರು.
ಬಿಜೆಪಿ ಮನವಿ: ಪುರಸಭೆಗೆ ಬಿಜೆಪಿಯಿಂದ ಆಯ್ಕೆಯಾಗಿರುವ ಚಂದ್ರಕಾಂತ ಗಂಗಾರಾಮ ಕಮ್ಮಾರ, ಉದಯ ಹೂಲಿ, ಸಂತೋಷ ಘಟಕಾಂಬ್ಳೆ, ಶಾಂತಾ ಹಿರೇಕರ, ರಾಜೇಶ್ವರಿ ಹಿರೇಮಠ, ರೂಪಾ ಗಿರಿ, ಸಂಗೀತಾ ಜಾದವ ಇವರ ನಿಯೋಗವು ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಅವರನ್ನು ಭೇಟಿಯಾಗಿ, ಹೈಕೋರ್ಟಿನಿಂದ ಮುಂದಿನ ಆದೇಶ ಬರುವವರೆಗೂ ಚುನಾವಣೆಯನ್ನು ನಡೆಸಬಾರದು ಎಂದು ಮನವಿ ಸಲ್ಲಿಸಿದರು.