ಮೈಸೂರು : ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರ(ಸಿಟಿಆರ್ಐ)ದ ವತಿಯಿಂದ ತಂಬಾಕು ಬೆಳೆಯುವ ಪರಿಶಿಷ್ಟ ವರ್ಗಗಳ 75ಕ್ಕೂ ಹೆಚ್ಚು ರೈತರಿಗೆ ಉಚಿತವಾಗಿ ಟಾರ್ಪಾಲಿನ್ಗಳನ್ನು ವಿತರಿಸಲಾಯಿತು.
ಹುಸೂರಿನ ಸಿಟಿಆರ್ಐ ಮುಖ್ಯಸ್ಥ ಡಾ.ಎಸ್.ರಾಮಕೃಷ್ಣನ್ ಮಾತನಾಡಿ, ಹದಗೊಳಿಸಿದ ತಂಬಾಕಿನಲ್ಲಿ ಅನ್ಯಪದಾರ್ಥಗಳು ಮಿಶ್ರಣಗೊಳ್ಳದಂತೆ ಮಾಡಲು ರೈತರು ಟಾರ್ಪಾಲಿನ್ ಬಳಸಿಕೊಳ್ಳಬೇಕು. ಇದೀಗ ತಂಬಾಕು ಸಸಿ ಮಡಿ(ನರ್ಸರಿ ಬೆಡ್)ಉತ್ಪಾದನಾ ಕಾಲವಾಗಿದ್ದು, ಮೇ ನಲ್ಲಿ ನಾಟಿ ಮಾಡಬಯಸುವ ರೈತರು ಈಗ ಸಸಿಮಡಿ ನಿರ್ವಹಣೆ ಮಾಡುವುದು ಅಗತ್ಯ. ರೋಗಮುಕ್ತ ಸಸಿಗಳನ್ನು ಪಡೆಯಲು ರೆಡೋಮಿಲ್ ಗೋಲ್ಡ್ ಔಷಧವನ್ನು 10 ಲೀಟರ್ ನೀರಿನ ಕ್ಯಾನ್ಗೆ 20 ಗ್ರಾಂ ಬೆರೆಸಿ ಬೀಜಗಳನ್ನು ಬಿತ್ತುವ ಮುನ್ನ ನರ್ಸರಿ ಬೆಡ್ಗೆ ಸಿಂಪಡಿಸಬೇಕು. ಸಸಿಗಳನ್ನು ಟ್ರೇಗಳಿಗೆ ಹಾಕಿದ ನಂತರ ಟಿಲ್ಟ್(10 ಲೀ.ಕ್ಯಾನಿಗೆ 5 ಗ್ರಾಂ) ಅಥವಾ ಗ್ಲೋ ಇಟ್(ಕ್ಯಾನಿಗೆ 7.5ಎಂಎಲ್.), ಅಥವಾ ಬ್ಲಿಟಾಕ್ಸ್(ಕ್ಯಾನಿಗೆ 10 ಗ್ರಾಂ) ಅಥವಾ ಕೊಸೈಡ್(ಕ್ಯಾನಿಗೆ 10ಗ್ರಾಂ) ಬಳಸಬಹುದು. ಕೀಟಬಾಧೆ ತಗುಲಿದರೆ ಕೊರಾಜನ್ ಔಷಧವನ್ನು ಕ್ಯಾನಿಗೆ 5 ಎಂಎಲ್ ಪ್ರಮಾಣದಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು ಎಂದರು.
ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಲಕ್ಷ್ಮಣರಾವ್ ಮಾತನಾಡಿ, ರೈತರು ತಂಬಾಕು ಕೃಷಿಯ ಕುರಿತು ಸಿಟಿಆರ್ಐ ವಿಜ್ಞಾನಿಗಳ ಸಲಹೆ ಪಡೆದು ರೋಗರುಜಿನ ಬಾಧೆಯನ್ನು ತಡೆಗಟ್ಟಲು ಕ್ರಮವಹಿಸುವುದು ಸೂಕ್ತ ಎಂದರು.
ಕಾರ್ಯಕ್ರಮದಲ್ಲಿ ಹರಾಜು ಅಧೀಕ್ಷರಾದ ಶಂಭುಲಿಂಗೌಡ, ಪ್ರಭಾಕರ್, ಐಟಿಸಿ ಕಂಪನಿಯ ಲೀಫ್ ಮ್ಯಾನೇಜರ್ ಶ್ರೀನಿವಾಸರೆಡ್ಡಿ, ಜಿಪಿಐನ ಶ್ರೀನಿವಾಸ, ಸಿಟಿಆರ್ಐ ಹಿರಿಯ ವಿಜ್ಞಾನಿ ಡಾ.ಮಹದೇವಸ್ವಾಮಿ, ಡಾ.ಜೆ.ಜೆ.ರಾಜಪ್ಪ, ಟಿ.ವೆಂಕಟೇಶ್ ಭಾಗವಹಿಸಿದ್ದರು.