ತರೀಕೆರೆ: ಉಚಿತ ಆರೋಗ್ಯ ಶಿಬಿರಗಳು ಆರಂಭಿಕ ಹಂತದ ರೋಗಗಳ ಪತ್ತೆಗೆ ಪ್ರಯೋಜನಕಾರಿ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ರೋಟರಿ ಸಂಸ್ಥೆ, ಇನ್ನರ್ವ್ಹೀಲ್ ಕ್ಲಬ್ ಹಾಗೂ ಕನಕಶ್ರೀ ಮಹಿಳಾ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರದಷ್ಟೇ ಕಾಳಜಿ ಸಂಘ ಸಂಸ್ಥೆಗಳು ವಹಿಸುತ್ತಿರುವುದರಿಂದ ಸಮಾಜದಲ್ಲಿ ಉತ್ತಮ ಕಾರ್ಯಗಳು ನಡೆಯುತ್ತಿವೆ. ಉಚಿತ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಬೇರೆ ಬೇರೆ ಆಸ್ಪತ್ರೆಗಳ ನುರಿತ ವೈದ್ಯರು ಆಗಮಿಸಿ ರೋಗ ಪತ್ತೆ ಹಚ್ಚುತ್ತಾರೆ. ಮುಂದಿನ ಚಿಕಿತ್ಸೆ ಬಗ್ಗೆ ಸಲಹೆ ನೀಡುವುದರಿಂದ ಮಾರಣಾಂತಿಕ ಕಾಯಿಲೆಗಳಿಂದ ಪಾರಾಗಬಹುದು ಎಂದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಗಳಲ್ಲಿ ಒಳ ಮತ್ತು ಹೊರ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ಲಭಿಸುತ್ತಿದೆ. ಆಸ್ಪತ್ರೆಗೆ ಹಂತಹಂತವಾಗಿ ಮತ್ತಷ್ಟು ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಟಿ.ಎಂ.ದೇವರಾಜ್ ಮಾತನಾಡಿ, ಸಂಘ ಸಂಸ್ಥೆಗಳ ಸಹಕಾರದಿಂದ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲೂ ಇಂತಹ ಶಿಬಿರ ಏರ್ಪಡಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಡಿಎಚ್ಒ ಡಾ. ಅಶ್ವತ್ಥಬಾಬು, ವೈದ್ಯರಾದ ಡಾ. ಶಿವಶಂಕರ್, ಡಾ. ಸಂತೋಷ್ಕುಮಾರ್, ಡಾ. ಮಂಜುನಾಥ್, ಡಾ. ಎಸ್.ಶಿವಮೂರ್ತಿ, ಡಾ. ಜಿ.ಸಿ.ಶರತ್, ಡಾ. ಮೋಹನ್, ಡಾ. ಭಾಗ್ಯಲಕ್ಷ್ಮೀ, ಪುರಸಭೆ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಇನ್ನರ್ವ್ಹೀಲ್ ಕ್ಲಬ್ ಮಾಜಿ ಅಧ್ಯಕ್ಷೆ ವಾಣಿ, ಕನಕಶ್ರೀ ಮಹಿಳಾ ಸಂಘದ ಅಧ್ಯಕ್ಷೆ ಲಕ್ಷ್ಮೀ ಇತರರಿದ್ದರು.