ಬೀದರ್: ಕೆರೆ ಮತ್ತು ಕಲ್ಲು ಕ್ವಾರಿಯಲ್ಲಿ ಮುಳುಗಿ ಮೃತಪಟ್ಟಿದ್ದ ಕಂಗಟಿ, ಅಲಿಯಂಬರ್ ಮತ್ತು ಹಮೀಲಾಪುರ ಗ್ರಾಮದ ಸಂತ್ರಸ್ತ ಪರಿವಾರಗಳಿಗೆ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಸಾಂತ್ವನ ಹೇಳಿ ವೈಯಕ್ತಿಕ ನೆರವು ನೀಡಿದ್ದಾರೆ.
ದಸರಾ ಹಬ್ಬದ ನಿಮಿತ್ತ ಬಟ್ಟೆ ಒಗೆಯಲು ಹೋಗಿದ್ದಾಗ ಕೆರೆಯಲ್ಲಿ ಮುಳುಗಿ ಕಂಗಟಿ ಗ್ರಾಮದ ಆನಂದಾ, ಪ್ರಜ್ವಲ್, ಸುನೀತಾ ಮತ್ತು ನಾಗೇಶ ಮೃತಪಟ್ಟಿದ್ದರು. ಸಂತ್ರಸ್ತ ಪರಿವಾರಗಳಿಗೆ ನಾಗಮಾರಪಳ್ಳಿ ವೈಯಕ್ತಿವಾಗಿ ಆರ್ಥಿಕ ನೆರವು ನೀಡಿದರಲ್ಲದೆ ಸರ್ಕಾರದಿಂದ ನಿಯಮಾನುಸಾರ ಪರಿಹಾರ ಕೊಡಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.
ಅಲಿಯಂಬರ್ ಕೆರೆಯಲ್ಲಿ ಮೃತಪಟ್ಟಿದ್ದ ಇಬ್ಬರು ಸಹೋದರರ ಪರಿವಾರಕ್ಕೂ ನೆರವು ನೀಡಿದರು. ಹಮೀಲಾಪುರದ ಮಿರ್ಜಾ ಯುಸೂಫ್ ಬೇಗ್ ಎಂಬುವರ ಪುತ್ರ ಮಿರ್ಜಾ ಆಯಾನ್ ಬೇಗ್ ಕಾಣೆಯಾಗಿದ್ದು, ಇತ್ತೀಚೆಗೆ ಗ್ರಾಮ ಹೊರಭಾಗದಲ್ಲಿದ್ದ ಕಲ್ಲು ಕ್ವಾರಿಯಲ್ಲಿ ಬಾಲಕನ ಶವ ಪತ್ತೆಯಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ನಾಗಮಾರಪಳ್ಳಿ ಅವರು ಊರಿಗೆ ತೆರಳಿ ಸಂತ್ರಸ್ತ ಪರಿವಾರದವರನ್ನು ಭೇಟಿಯಾಗಿ ಸಾಂತ್ವನ ಹೇಳಿ ಧನಸಹಾಯ ಮಾಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ ಪಾಟೀಲ್, ಗ್ರಾಪಂ ಅಧ್ಯಕ್ಷ ಮಹಾದೇವ ಬಿರಾದಾರ್, ಅಶೋಕ ಆಣದೂರೆ, ಶಿವರಾಜ ರೇವಶೆಟ್ಟಿ, ಶ್ರೀಪತರಾವ ಡೊಣ್ಣೆ, ಪಂಢರಿನಾಥ ರಾಯಗೊಂಡ, ಜಗನ್ನಾಥ ಪಾಪಡೆ, ಪ್ರಕಾಶ ಕೋರೆ, ಸೋಮಣ್ಣ ಶಾಸ್ತ್ರಿ, ಇಬ್ರಾಹಿಂ ಸಾಬ್, ಗಣಪತಿ ಹೂಗಾರ ಇತರರಿದ್ದರು.