ಚಿಕ್ಕಮಗಳೂರು: ನಾವು ಎಷ್ಟೆ ಉಪಕಾರ ಮಾಡಿದರೂ ಕೆಲವೊಮ್ಮೆ ಮನುಷ್ಯ ಅಪಕಾರ ಮಾಡುವ ಸಾಧ್ಯತೆ ಹೆಚ್ಚು. ಆದರೆ ನಿಯತ್ತಿಗೆ ಹೆಸರಾದ ನಾಯಿ ತುತ್ತು ಅನ್ನ ಹಾಕಿದವರಿಗೆ ದ್ರೋಹ ಬಗೆಯುವ ಕೆಲಸ ಮಾಡಿಲ್ಲ. ಹಾಗಾಗಿ ನಾಯಿ ಜಗತ್ತಿನಲ್ಲೇ ಅತ್ಯಂತ ನಿಯತ್ತಿನ ಪ್ರಾಣಿ ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ಚಿಕ್ಕಮಗಳೂರು ಹಬ್ಬದ ಅಂಗವಾಗಿ ನಗರದ ಎಂಎಲ್ಎಂಎನ್ ಕಾಲೇಜು ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ವಾನ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಮನುಷ್ಯರ ಜತೆ ಮಾತ್ರ ಒಡನಾಡಿಯಾಗಲಿಲ್ಲ, ಪ್ರಾಣಿಗಳ ಜತೆಯಲ್ಲೂ ಒಡನಾಟ ಇಟ್ಟುಕೊಂಡ ಗೋವಿನ ಜತೆ ಪ್ರಾರಂಭವಾಗಿ ಕೊನೆಗೆ ನಾಯಿ ಮನುಷ್ಯನ ಒಡನಾಡಿ ಪ್ರಾಣಿಯಾಯಿತು. ಅದರ ನಿಯತ್ತಿಗೆ ಸಂಬಂಧ ಪಟ್ಟ ನೂರಾರು ಚಿತ್ರಗಳು ಬಂದಿವೆ. ಇತ್ತಿಚೆಗೆ ಬಂದ ಚಾರ್ಲಿ 777 ಅದಕ್ಕೊಂದು ಜೀವಂತ ಉದಾಹರಣೆ ಎಂದರು.
ಅಪರಾಧ ಪ್ರಕರಣಗಳಲ್ಲಿ ಅಪರಾಧಿಯನ್ನು ಪತ್ತೆಹಚ್ಚಲು ನೆರವಾಗುವುದು ತರಬೇತಿ ಪಡೆದ ನಾಯಿಗಳು. ನಾಯಿಗೆ ಅಷ್ಟು ನಿಯತ್ತಿರಬೇಕಾದರೆ ನಮಗೆ ಇನ್ನು ಹೆಚ್ಚಿರಬೇಕು. ನಿಯತ್ತನ್ನು ನಾವು ನಾಯಿಯಿಂದ ಕಲಿಯಬೇಕು ಎಂದರು.
ಜಿಪಂ ಸಿಇಒ ಜಿ.ಪ್ರಭು ಮಾತನಾಡಿ, ಕಲೆ ಸಾಹಿತ್ಯ ಸಂಸ್ಕೃತಿ, ಇತಿಹಾಸ ಭೌಗೋಳಿಕ ನೆಲೆ, ವೈಜ್ಞಾನಿಕ, ಪಾರಂಪರಿಕ ವಿಷಯಗಳು, ಪ್ರಾಕೃತಿಕ ಸಂಪತ್ತುಗಳು, ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಹೀಗೆ ಜೆಲ್ಲೆಯ ಬಗ್ಗೆ ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯೇ ಇದೆ. ಪಶು ಸಂಗೋಪನಾ ಇಲಾಖೆ ವಸ್ತು ಪ್ರದರ್ಶನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಜತೆಗೆ ಈ ಶ್ವಾನ ವೈಭವವನ್ನು ಏರ್ಪಡಿಸಿ ಮಕ್ಕಳು, ಹಿರಿಯರು, ಯುವಕ, ಯುವತಿಯರಿಗೆ ಕಣ್ತುಂಬಿಕೊಳ್ಳುವ ಅವಕಾಶ ಇಲಾಖೆ ಕಲ್ಪಿಸಿದೆ ಎಂದರು.
ರಾಜ್ಯ ಸಫಾಯಿ ಕರ್ವಚಾರಿ ನಿಗಮದ ಅಧ್ಯಕ್ಷ ಕೆ.ಪಿ.ವೆಂಕಟೇಶ್, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಎಸ್ಪಿ ಉಮಾ ಪ್ರಶಾಂತ್, ಡಿಸಿಎಫ್ ಎನ್.ಎಸ್.ಕ್ರಾಂತಿ, ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಮೋಹನ್ಕುಮಾರ್, ಸಹಾಯಕ ನಿರ್ದೇಶಕ ಡಾ.ಮಣಿಕಂಠ, ಅಮರ್, ಲೋಕೇಶ್ ಇದ್ದರು.