ದಾವಣಗೆರೆ: ಕಾಂಗ್ರೆಸ್ಸಿಗರಿಗೆ ಬಾಬರ್ ಬಿಟ್ಟು ಕೊಡೋದಿಕ್ಕೆ ಆಗುತ್ತಿಲ್ಲ. ಶ್ರೀರಾಮನ ಜತೆ ನಿಲ್ಲಲಿಕ್ಕೂ ಆಗುತ್ತಿಲ್ಲ. ಇಬ್ಬರಲ್ಲಿ ಯಾರು ಬೇಕೆಂಬ ಗೊಂದಲದಿಂದ ಅವರು ಹೊರಬರಲಿ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ದಾವಣಗೆರೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಮನಿಲ್ಲದ ಭಾರತವನ್ನು ಕಲ್ಪಿಸಲೂ ಸಾಧ್ಯವಿಲ್ಲ. ಬಾಬರ್ ಬೇಕಿದ್ದಲ್ಲಿ ನಿಮಗಿಲ್ಲಿ ಜಾಗವಿಲ್ಲ. ರಾಮ ಬೇಕು ಎನ್ನುವುದಾದರೆ ಸಣ್ಣತನದ ರಾಜಕಾರಣ, ಕೊಂಕು ಮಾತುಗಳನ್ನು ಕೈಬಿಡಿ. ಕೋಟ್ಯಂತರ ಜನರು ಅಪೇಕ್ಷಿಸಿದ್ದನ್ನು ನೋಡಿ ಖುಷಿಪಡಬೇಕು ಎಂದು ಕಾಂಗ್ರೆಸ್ಸಿಗರಿಗೆ ಕಿವಿಮಾತು ಹೇಳಿದರು.
ಭಾರತ ವಿಭಜನೆಯನ್ನು ಮೊಳಕೆಯಲ್ಲೇ ಚಿವುಟಿ ಹಾಕಬಹುದಿತ್ತು. ಆದರೆ ಕಾಂಗ್ರೆಸ್ ಮನಸ್ಥಿತಿಯಿಂದಾಗಿ ಅದಾಗಲಿಲ್ಲ. ಭಾರತಕ್ಕೆ ಸಂಬಂಧವೇ ಇಲ್ಲದ ಖಿಲಾಫತ್ ಚಳವಳಿಗೆ ಬೆಂಬಲಿಸಿದ ಓಲೈಕೆ ನೀತಿಯಿಂದ ಭಾರತ ಇಬ್ಭಾಗವಾಯಿತು. ಲಕ್ಷಾಂತರ ಜನರ ಬಲಿದಾನಕ್ಕೆ ಕಾರಣವಾದ ಭಾರತದ ವಿಭಜನೆಯನ್ನು ಸಮರ್ಥಿಸಿಕೊಳ್ಳಲಾಗದು ಎಂದು ಹೇಳಿದರು.
ಕಾಂಗ್ರೆಸ್, 1992ರಲ್ಲಿ ಹಿಮಾಚಲ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶ ಬಿಜೆಪಿ ಸರ್ಕಾರಗಳನ್ನು ವಜಾ ಮಾಡಿತು. ಬಿಜೆಪಿ ಪ್ರಣಾಳಿಕೆ ನಿರ್ಧಾರದಂತೆ ರಾಮಮಂದಿರ ನಿರ್ಮಾಣಕ್ಕೆ ನಾಲ್ಕು ದಶಕದ ಹೋರಾಟ ನಡೆಸುತ್ತಿದೆ. ರಾಷ್ಟ್ರೀಯ ನಿರ್ಣಯ ಕೈಗೊಳ್ಳದ ಕಾಂಗ್ರೆಸ್, ದೇಶದ ಉದ್ದಗಲಕ್ಕೂ ರಾಮನ ಕುರುಹುಗಳಿದ್ದಾಗ್ಯೂ ಕಾಲ್ಪನಿಕ ವ್ಯಕ್ತಿ ಎಂಬುದಾಗಿ ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಿ ರಾಜಕಾರಣ ಮಾಡಿತು. ಆದರೆ ನಮ್ಮದು ರಾಷ್ಟ್ರಕಾರಣಕ್ಕಾಗಿ ರಾಮಮಂದಿರ. ರಾಜಕಾರಣಕ್ಕಾಗಿ ಅಲ್ಲ ಎಂದು ಉತ್ತರಿಸಿದರು.
ಲೋಕಸಭೆ ಚುನಾವಣೆಯಲ್ಲಿ ಯುವಕರಿಗೆ ಆದ್ಯತೆ ಎಂಬ ರಾಜ್ಯಾಧ್ಯಕ್ಷರ ಹೇಳಿಕೆಗೆ ಡಿವಿಜಿಯವರ ಮಂಕುತಿಮ್ಮನ ಕಗ್ಗವನ್ನು ಉದಾಹರಿಸಿದ ರವಿ, ಹೊಸಬರು ಮತ್ತು ಹಳಬರು ಎರಡರ ಸಮ್ಮಿಲವೂ ಇರಲಿದೆ. ಟಿಕೆಟ್ ಹಂಚಿಕೆ ಬಗ್ಗೆ ಪಕ್ಷದ ಸಂಸದೀಯ ಮಂಡಳಿ ನಿರ್ಧರಿಸಲಿದೆ. ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದರು.
ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ನಾನು ಎಲ್ಲಿ ಸ್ಪರ್ಧಿಸಬೇಕು, ಸ್ಪರ್ಧಿಸಬಾರದು ಎಂಬುದನ್ನೂ ಪಕ್ಷ ನಿರ್ಣಯಿಸಲಿದೆ. ಯಾರೇ ಅಭ್ಯರ್ಥಿಯಾದರೂ ಗೆಲುವಿಗೆ ಶ್ರಮಿಸುವೆ ಎಂದು ಹೇಳಿದರು.