More

    ಶೇಂಗಾ ಬೀಜ ಗಂಟಲಲ್ಲಿ ಸಿಲುಕಿ ಮಗು ಸಾವು

    ಯಲ್ಲಾಪುರ: ಶೇಂಗಾ ಬೀಜ ತಿಂದು ಗಂಟಲಲ್ಲಿ ಸಿಲುಕಿ ಮೃತಪಟ್ಟ ಮಗುವನ್ನು ಬದುಕಿಸಿಕೊಡುವಂತೆ ಅಜ್ಜಿಯೊಬ್ಬರು ದೇವಸ್ಥಾನದಲ್ಲಿ ಮಗುವಿನ ಶವವಿಟ್ಟು ದೇವರ ಮೊರೆ ಹೋದ ಕರುಣಾಜನಕ ಘಟನೆ ಪಟ್ಟಣದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

    ಪಟ್ಟಣದ ಗಣಪತಿ ಗಲ್ಲಿಯ ರಾಮನಾಥ ಆಚಾರಿ ಎಂಬುವರ ಎರಡೂವರೆ ವರ್ಷದ ಮಗು ಸಾತ್ವಿಕ್ ಮನೆಯಲ್ಲಿ ಶೇಂಗಾ ಬೀಜಗಳನ್ನು ತಿಂದಿದ್ದ. ಅದು ಗಂಟಲಲ್ಲಿ ಸಿಲುಕಿಕೊಂಡಿದೆ. ಇದರಿಂದಾಗಿ ಮಗುವಿನ ಉಸಿರಾಟದಲ್ಲಿ ತೊಂದರೆಯಾಗಿದೆ. ಮನೆಯವರು ಆತಂಕಗೊಂಡು ಪರಿಶೀಲಿಸಿದಾಗ ಶೇಂಗಾ ತಿಂದು ಹೀಗಾಗಿರುವುದು ಗಮನಕ್ಕೆ ಬಂದಿದೆ. ತೆಗೆಯಲು ಪ್ರಯತ್ನಿಸಿದಾಗ ಎರಡು ಬೀಜಗಳು ಹೊರಬಂದಿವೆ. ಆಗಲೂ ಮಗುವಿನ ಉಸಿರಾಟದಲ್ಲಿ ತೊಂದರೆ ಉಂಟಾಗಿದೆ. ತಕ್ಷಣ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಇನ್ನೊಂದು ಶೇಂಗಾ ಬೀಜ ಹೊರತೆಗೆದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಮಗು ಅಸುನೀಗಿದೆ. ಮಗುವಿನ ತಾಯಿ ಹಾಗೂ ಅಜ್ಜಿ ಮಗುವನ್ನು ಉಳಿಸಿಕೊಡುವಂತೆ ವೈದ್ಯರ ಕಾಲಿಗೆ ಬಿದ್ದು ಬೇಡಿಕೊಳ್ಳುವ ದೃಶ್ಯ ಮನ ಕರಗುವಂತಿತ್ತು.

    ದೇವರ ಮೊರೆ ಹೋದ ಅಜ್ಜಿ: ಬಳಿಕ ಮಗುವಿನ ಶವವನ್ನು ಹಿಡಿದು ಅಜ್ಜಿ ಅಲ್ಲಿಂದ ಓಡಲಾರಂಭಿಸಿದ್ದು, ಏನಾದರೂ ಅನಾಹುತ ಮಾಡಿಕೊಳ್ಳಬಹುದೆಂಬ ಆತಂಕದಿಂದ ಸೇರಿದ ಜನರೆಲ್ಲ ಆಕೆಯನ್ನು ಹಿಂಬಾಲಿಸಿದ್ದರು. ಸಮೀಪದಲ್ಲಿದ್ದ ಗಣಪತಿ ದೇವಸ್ಥಾನಕ್ಕೆ ಹೋದ ಅಜ್ಜಿ, ದೇವರ ಮುಂದೆ ಮಗುವಿನ ಶವವನ್ನು ಮಲಗಿಸಿ, ಜೋರಾಗಿ ಗಂಟೆ ಬಾರಿಸುತ್ತಾ ‘ಓಂ ಗಣೇಶಾಯ ನಮಃ’ ಎಂದು ಪ್ರಾರ್ಥಿಸತೊಡಗಿದ್ದಾರೆ. ಮಗು ಸತ್ತಿದೆ ಎಂದು ಅಲ್ಲಿ ಸೇರಿದ ಜನರು ಎಷ್ಟೇ ಹೇಳಿದರೂ ಅದನ್ನು ಕೇಳದ ಅಜ್ಜಿ ‘ದೇವರಿದ್ದಾನೆ, ಮಗುವನ್ನು ರಕ್ಷಿಸುತ್ತಾನೆ, ಮಗುವಿಗೆ ಏನೂ ಆಗಿಲ್ಲ’ ಎನ್ನುತ್ತ ದೇವರೇ ಮಗುವನ್ನು ರಕ್ಷಿಸುವಂತೆ ಪ್ರಾರ್ಥಿಸಿದರು. ಕೊನೆಗೆ ಸಂಬಂಧಿಕರು, ಕುಟುಂಬದವರು, ಸೇರಿದ ಜನರು ಹೇಗೋ ಆಕೆಯ ಮನವೊಲಿಸಿ ಮನೆಗೆ ಕರೆದೊಯ್ದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts