ಚಿಕ್ಕಮಗಳೂರು: ವಿದ್ಯಾರ್ಥಿಗಳು ಗುರು ಹಿರಿಯರ ಮತ್ತು ಪಾಲಕರ ಸಲಹೆ, ಮಾರ್ಗದರ್ಶನ ಪಡೆದು ಉನ್ನತ ವ್ಯಾಸಂಗ ಮಾಡಿ ಜವಾಬ್ದಾರಿ ಸ್ಥಾನಗಳನ್ನು ಅಲಂಕರಿಸಿ ಸಮಾಜಕ್ಕೆ ಕೊಡುಗೆ ನೀಡಿದಾಗ ನಮ್ಮ ಸಮಾಜ ಮತ್ತಷ್ಟು ಬಲಿಷ್ಠವಾಗಿ ಬೆಳೆಯುತ್ತದೆ ಎಂದು ಕೃಷಿಕ ಸವೋದಯ ಫೌಂಡೇಶನ್ ಗೌರವ ಕಾರ್ಯದರ್ಶಿ ತಿಮ್ಮೇಗೌಡ ಹೇಳಿದರು.
ಬುಧವಾರ ನಗರದ ಒಕ್ಕಲಿಗರ ಭವನದಲ್ಲಿ ಶ್ರೀಆದಿಚುಂಚನಗಿರಿ ಮಹಾ ಸಂಸ್ಥಾನಮಠದ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ 78ನೇ ವರ್ಷದ ಜನ್ಮ ದಿನೋತ್ಸವ, ಕೃಷಿಕ್ ಸವೋದಯ ಫೌಂಡೇಶನ್ ಕಚೇರಿ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿ ರಾಜ್ಯದ ಮೂಲೆ ಮೂಲೆಗಳಲ್ಲಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳನ್ನು ಪ್ರಾರಂಭಿಸಿ ಯುವ ಪೀಳಿಗೆಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟವರು ಬಾಲಗಂಗಾಧರನಾಥ ಸ್ವಾಮೀಜಿ ಎಂದರು.
ಗುರುಗಳು ಸಮಾಜ ಕಟ್ಟಲು ಹಳ್ಳಿ, ಹಳ್ಳಿಗಳಿಗೆ ತೆರಳಿ ದೇಣಿಗೆ ಸಂಗ್ರಹಿಸಿ ಶ್ರಮ ಪಟ್ಟು ಸಮಾಜವನ್ನು ಬಲಿಷ್ಠಗೊಳಿಸಿದ್ದಾರೆ. ಮೌಢ್ಯತೆ ತೊರೆದು, ಶಿಕ್ಷಣ ಮತ್ತು ವಿಜ್ಞಾನದಲ್ಲಿ ಕ್ರಾಂತಿ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿ ಗ್ರಾಮೀಣ ಭಾಗದಲ್ಲಿಯೇ ಹೆಚ್ಚಾಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಯುವ ಪೀಳಿಗೆಗೆ ನಮ್ಮ ಭಾಷೆ ಸಂಸ್ಕೃತಿ ಜತೆಗೆ ಸಂಸ್ಕಾರವನ್ನು ನೀಡಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಉಮಾಪತಿ ಮಾತನಾಡಿ, ಗುರುಹಿರಿಯರ ಆಶೀರ್ವಾದದಿಂದ ಒಕ್ಕಲಿಗರ ಸಂಘ ರಾಜ್ಯದಲ್ಲಿ ಮಾದರಿಯಾಗಿದೆ, ಉನ್ನತ ಸ್ಥಾನ ಅಲಂಕರಿಸಲು ಬಹಳ ಕಷ್ಟಪಡಬೇಕಾಗುತ್ತದೆ. ವಿದ್ಯಾರ್ಥಿ ದೆಸೆಯಲ್ಲಿ ಉತ್ತಮ ವ್ಯಾಸಂಗ ಮಾಡಿದರೆ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶಗಳು ಸಿಗುತ್ತವೆ ಎಂದರು.
ಜಿಲ್ಲಾ ಒಕ್ಕಲಿಗರ ಸಂಘದ ಗೌರವ ಕಾರ್ಯದರ್ಶಿ ಎಂ.ಸಿ.ಪ್ರಕಾಶ್, ನಿವೃತ್ತ ಐಎಎಸ್ ಅಧಿಕಾರಿ ಚಿಕ್ಕಣ್ಣ, ಉಪಾಧ್ಯಕ್ಷ ಲಕ್ಷ್ಮಣ್ಗೌಡ, ಆದಿಚುಂಚನಗಿರಿ ವಿಶ್ವ ವಿದ್ಯಾಲಯ ರಿಜಿಸ್ಟರ್ ಸುಬ್ಬರಾವ್, ಪ್ರಾಚಾರ್ಯ ಸಿ.ಟಿ.ಜಯದೇವ್, ವೈದ್ಯರಾದ ಜೆ.ಪಿ.ಕೃಷ್ಣೇಗೌಡ, ಮಾಜಿ ಅಧ್ಯಕ್ಷ ಹಳಸೆ ಶಿವಣ್ಣ, ರಾಜೇಗೌಡ, ಮಾಜಿ ಕಾರ್ಯದರ್ಶಿ ಉಮೇಶ್ಚಂದ್ರ ನಿರ್ದೇಶಕರಾದ ಕೆ.ಕೆ.ಮನುಕುಮಾರ್, ದಿನೇಶ್, ಕಳವಾಸೆ ರವಿ, ವಿಕ್ರಾಂತ್, ಪೃಥ್ವಿರಾಜ್, ಶ್ಯಾಮ್ ಯು.ಪಿ.ಮನುಕುಮಾರ್, ಸುಜಿತ್, ಮಹಿಳಾ ಸಂಘದ ಅಧ್ಯಕ್ಷೆ ಸವಿತಾರಮೇಶ್, ಕೆ.ಕೆ.ಮೋಹನ್, ಸಿಇಒ ಕುಳ್ಳೇಗೌಡ, ವ್ಯವಸ್ಥಾಪಕ ರಾಜು ಉಪಸ್ಥಿತರಿದ್ದರು.