ವಿನೋದ್ ಮೂಡಗದ್ದೆ ಗೋಣಿಕೊಪ್ಪ
ಮಾನವನಿಗೆ ಜೀವಿಸಲು ಗಾಳಿ, ನೀರು, ಆಹಾರ ಎಷ್ಟು ಮುಖ್ಯವೋ ನೆಮ್ಮದಿಯಿಂದ ಜೀವನ ಸಾಗಿಸಲು ಸೂರು ಕೂಡ ಅಷ್ಟೇ ಮುಖ್ಯ. ಇಂದು ಅದೆಷ್ಟೋ ಜನ ಸೂರಿಲ್ಲದೆ ಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ಇಂತಹವರಿಗೆ ಸೂರು ಒದಗಿಸಲು ಅನೇಕ ಯೋಜನೆಗಳನ್ನು ತಂದರೂ, ಅದು ಫಲಾನುಭವಿಗಳಿಗೆ ತಲುಪುತ್ತಿಲ್ಲ. ಗೋಣಿಕೊಪ್ಪ ಪಟ್ಟಣವನ್ನು ದಿನವೂ ಗುಡಿಸಿ ಸ್ವಚ್ಛವಾಗಿ ಇಡುವ ಪೌರಕರ್ಮಿಕರು ಸ್ವಂತ ಸೂರಿಲ್ಲದೆ ಗುಡಿಸಲಿನಲ್ಲಿ ಜೀವಿಸುತ್ತಿದ್ದಾರೆ.
ನಂ.1 ಕನ್ನಡ ಪತ್ರಿಕೆ ವಿಜಯವಾಣಿ ಗೋಣಿಕೊಪ್ಪಲಿನ ಪೌರಕಾರ್ಮಿಕ ಕಾಲನಿಯಲ್ಲಿ ಬುಧವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಲಸವನ್ನು ಕಾಯಂಗೊಳಿಸಿ ಅಥವಾ ಶಾಶ್ವತ ಸೂರು ಒದಗಿಸಿ ಎಂದು ಒತ್ತಾಯಿಸಿದರು. ಈ ಕುರಿತು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಎಂದು ದೂರಿದರು.
ಸುಮಾರು 40 ವರ್ಷಗಳಿಂದ ಗೋಣಿಕೊಪ್ಪ ಮಾರುಕಟ್ಟೆ ಸಮೀಪ ಇಕ್ಕಟ್ಟಿನ ಪ್ರದೇಶದಲ್ಲಿ 18 ಪೌರಕಾರ್ಮಿಕ ಕುಟುಂಬಗಳು ವಾಸಿಸುತ್ತಿದ್ದು, ಸರ್ಕಾರದಿಂದ ದೊರಕಬೇಕಾದ ಯಾವುದೇ ಮೂಲ ಸೌಕರ್ಯಗಳು ತಲುಪಿಲ್ಲ. ಪಟ್ಟಣವನ್ನು ಸ್ವಚ್ಛವಾಗಿಡುವ ನಮ್ಮ ಬದುಕಿಗೆ ಶಾಶ್ವತ ನೆಲೆ ಇಲ್ಲ ಎಂದ ಅಳಲು ತೋಡಿಕೊಂಡರು.
30 ವರ್ಷದಿಂದ ಒಂದೆಡೆ ಕೆಲಸ ನಿರ್ವಹಿಸುತ್ತಿದ್ದರೂ ಇದುವರೆಗೆ ಕಾಯಂಗೊಳಿಸದೆ ಗುತ್ತಿಗೆ ಆಧಾರದ ಮೇಲೆ ವೇತನ ನೀಡಲಾಗುತ್ತಿದೆ. ಕುಂದ ಗ್ರಾಮದಲ್ಲಿ ಪೌರಕಾರ್ಮಿಕರಿಗೆ ಮನೆ ಕಟ್ಟಲು ಜಾಗ ಗುರುತಿಸಲಾಗಿದೆ. ಆದರೂ, ಅಲ್ಲಿಂದ ಬೆಳಗ್ಗೆ ಗೋಣಿಕೊಪ್ಪ ಪಟ್ಟಣಕ್ಕೆ ಬರುವುದು ಕಷ್ಟದ ಮಾತು. ಸ್ವಂತ ವಾಹನ ಇರುವವರು ಬರಬಹುದು. ಉಳಿದವರಿಗೆ ಕಷ್ಟವಾಗುತ್ತದೆ. ಕೆಲಸ ಮುಗಿದ ಮೇಲೆ ಮನೆಗೆ ತೆರಳಿ ಮಕ್ಕಳನ್ನು ಶಾಲೆಗೆ ಹೊರಡಿಸುವುದು ಕಷ್ಟವಾಗುತ್ತದೆ. ಪೌರಕಾರ್ಮಿಕರಿಗೆ ಪಟ್ಟಣದಲ್ಲಿಯೇ ಸೂರು ಕಲ್ಪಿಸಬೇಕು ಎಂದರು.