ಧಾರವಾಡ/ಹುಬ್ಬಳ್ಳಿ: ತೌಕ್ತೆ ಚಂಡಮಾರುತದ ಪ್ರಭಾವ ಜಿಲ್ಲೆಯ ಮೇಲೆಯೂ ಆಗಿದ್ದು, ಭಾನುವಾರ ನಸುಕಿನ ಜಾವದಿಂದಲೇ ನಗರದಲ್ಲಿ ರಭಸವಾದ ಗಾಳಿಯೊಂದಿಗೆ ಮಳೆ ಸುರಿಯುತ್ತಿದೆ. ಸೂರ್ಯದರ್ಶನ ಸಾಧ್ಯವಾಗದ್ದರಿಂದ ಬೇಸಿಗೆ ವಾತಾವರಣ ಮಾಯವಾಗಿ, ಮಳೆಗಾಲದಂತೆ ಭಾಸವಾಗುತ್ತಿದೆ.
ಶನಿವಾರ ಸಂಜೆ ಸಹ ಕೆಲ ಹೊತ್ತು ಮಳೆ ಸುರಿದಿತ್ತು. ಕೆಲವು ಕಡೆ ರಾತ್ರಿಯೂ ಮಳೆಯಾಯಿತು. ಭಾನುವಾರ ಬೆಳಗ್ಗೆ ಆರಂಭವಾದ ಮಳೆ ಸಂಜೆವರೆಗೂ ಮೇಲಿಂದ ಮೇಲೆ ಸುರಿದಿದೆ. ಸಂಜೆ ಹೊತ್ತಿಗೆ ಗಾಳಿ ಪ್ರಮಾಣ ಹೆಚ್ಚಾಗಿ ಜಿಟಿ ಜಿಟಿ ಮಳೆ ಸುರಿಯಿತು.
ಲಾಕ್ಡೌನ್ ಸಂದರ್ಭದಲ್ಲಿ ಅವಳಿ ನಗರದ ಜನರ ಓಡಾಟ ನಿಯಂತ್ರಿಸಲು ಪೊಲೀಸರು ಪರದಾಡುತ್ತಿದ್ದರು. ಆದರೆ, ಮಳೆಯಿಂದ ಬೆಳಗ್ಗೆ ಅಗತ್ಯ ವಸ್ತುಗಳ ಖರೀದಿಗೆ ಸಹ ಹೆಚ್ಚಿನ ಜನರು ಆಗಮಿಸಿರಲಿಲ್ಲ. ಮಳೆಯ ಹೊಡೆತಕ್ಕೆ ಜನರು ಬೆಚ್ಚಗೆ ಮನೆಯಲ್ಲೇ ಇದ್ದರು.
ಹವಾಮಾನ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಎಲ್ಲ ತಾಲೂಕು ತಹಸೀಲ್ದಾರರು, ಗ್ರಾಪಂ ಪಿಡಿಒಗಳಿಗೆ ಸೂಚಿಸಲಾಗಿದೆ. ಮಳೆಯಿಂದ ಧಾರವಾಡ ತಾಲೂಕು ಕನಕೂರಿನಲ್ಲಿ ಒಂದು ಮನೆ ಬಿದ್ದಿದ್ದು ಬಿಟ್ಟರೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.