ಕಲಘಟಗಿ: ಜಿಲ್ಲೆಯಾದ್ಯಂತ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ವೈರಸ್ ಹರಡುವುದನ್ನು ತಡೆಗಟ್ಟಲು ಪಟ್ಟಣದ ಪಟ್ಟಣದ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಶನಿವಾರ ವ್ಯಾಪಾರಸ್ಥರ ಕರೊನಾ ರ್ಯಾಪಿಡ್ ಪರೀಕ್ಷೆ ಮಾಡಲಾಯಿತು.
ಪಟ್ಟಣದ ಬಮ್ಮಿಗಟ್ಟಿ ಕ್ರಾಸ್ ಹಾಗೂ ಬಸ್ ನಿಲ್ದಾಣದಲ್ಲಿನ ಹೂವು ಮತ್ತು ಹಣ್ಣಿನ ಅಂಗಡಿ, ಹೋಟೆಲ್, ಬೇಕರಿ ಇತರ ವ್ಯಾಪಾರ ಮಾಡುತ್ತಿರುವ ವರ್ತಕರ ರ್ಯಾಪಿಡ್ ಟೆಸ್ಟ್ ಮಾಡುವ ಮೂಲಕ ತಾಲೂಕಿನಲ್ಲಿ ಕರೊನಾ ನಿಯಂತ್ರಣ ಕಾರ್ಯಕ್ಕೆ ತಾಲೂಕಾಡಳಿತದ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ರ್ಯಾಪಿಡ್ ಟೆಸ್ಟ್ ಮಾಡಿಸಲು ಮುಂದಾಗಬೇಕು ಎಂದು ತಾಲೂಕು ಕರೊನಾ ನೋಡಲ್ ವೈದ್ಯಾಧಿಕಾರಿ ಡಾ. ಬಸವರಾಜ ಬಾಸೂರ ತಿಳಿಸಿದ್ದಾರೆ.
ತಹಸೀಲ್ದಾರ್ ಅಶೋಕ ಶಿಗ್ಗಾಂವಿ, ಪ.ಪಂ ಮುಖ್ಯಾಧಿಕಾರಿ ಬಿ. ಚಂದ್ರಶೇಖರ, ಡಾ. ಪ್ರಕಾಶ ಅಂಗಡಿ, ಡಾ. ರವಿಕುಮಾರ ಜಲಪೂರ, ಡಾ. ಶಬ್ಬೀರ ಅರಮನಿ, ಎನ್.ಬಿ. ಕರಡಿ, ಮಂಜುಳಾ ಕಟ್ಟಿಮನಿ, ಮೊನಿಕಾ ಅಂಗಡಿ, ಮಂಜುಳಾ ಮೊರಬ, ಅಕ್ಕಮ್ಮ ಬಡಿಗೇರ, ಗೀತಾ ಕಮ್ಮಾರ ಪೊಲೀಸ್, ಆರೋಗ್ಯ ಮತ್ತು ಪ.ಪಂ. ಸಿಬ್ಬಂದಿ ಇದ್ದರು.
192 ಜನರಿಗೆ ತಪಾಸಣೆ: ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ಪ್ರದೇಶದ ವಿವಿಧೆಡೆ ಶನಿವಾರದಂದು 192 ಜನರಿಗೆ ಮೊಬೈಲ್ ವಾಹನಗಳಲ್ಲಿ ಗಂಟಲ ದ್ರವ ಪರೀಕ್ಷೆ ನಡೆಸಲಾಗಿದೆ. ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ, ನೂಲ್ವಿ ಹಾಗೂ ಶಿರಗುಪ್ಪಿಯಲ್ಲಿ 23 ಜನರ ಹಾಗೂ ನಗರದ ಒಟ್ಟು 9 ವಿವಿಧ ಸ್ಥಳಗಳಲ್ಲಿ 169 ಜನರ ಗಂಟಲ ದ್ರವ ಪರೀಕ್ಷಿಸಲಾಗಿದೆ. ಶನಿವಾರ ನಡೆಸಿದ ಪರೀಕ್ಷೆಯಲ್ಲಿ ಯಾರೊಬ್ಬರಿಗೂ ಕರೊನಾ ಸೋಂಕು ದೃಢಪಟ್ಟಿಲ್ಲ.