ಚಿತ್ರದುರ್ಗ: ಕಲಬುರ್ಗಿ ನಗರದ ಸಾಯಿ ಮಂದಿರ ಸಮೀಪ ಹಾಡಹಗಲೇ ವಕೀಲ ಈರಣ್ಣಗೌಡ ಪಾಟೀಲ್ ಅವರನ್ನು ಹತ್ಯೆಗೈದಿರುವ ಘಟನೆ ಖಂಡಿಸಿ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು, ನೂರಾರು ವಕೀಲರು ಜಿಲ್ಲಾ ನ್ಯಾಯಾಲಯದ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ತುರ್ತು ಸಭೆ ನಡೆಸಿ ಬೀದಿಗಿಳಿದು ಪ್ರತಿಭಟಿಸಿ, ಆಕ್ರೋಶ ಹೊರಹಾಕಿದರು. ಹತ್ಯೆಗೈದ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ಹಲ್ಲೆ, ದೌರ್ಜನ್ಯ ಹೆಚ್ಚುತ್ತಿದೆ. ಆದ್ದರಿಂದ ಮೈಸೂರಿನಲ್ಲಿ ನಡೆದ ವಕೀಲರ ಸಮಾವೇಶದಲ್ಲಿ 6ನೇ ಗ್ಯಾರಂಟಿಯಾಗಿ ವಕೀಲರ ಸಂಕರಕ್ಷಣಾ ಕಾಯ್ದೆ ಜಾರಿಗೊಳಿಸುವ ಭರವಸೆ ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಡೇರಿಸುವ ಮೂಲಕ ವಕೀಲರಿಗೆ ಭದ್ರತೆ ಒದಗಿಸಬೇಕು ಎಂದು ಕೋರಿದರು.
ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಬಿ.ಎಂ.ಅನಿಲ್ಕುಮಾರ್, ಪದಾಧಿಕಾರಿಗಳಾದ ಆರ್.ಗಂಗಾಧರ್, ಬಿ.ಇ.ಪ್ರದೀಪ್, ಬಿ.ಗಿರೀಶ್, ದಾಸಪ್ಪ, ಸುರೇಶ್, ಎಚ್.ಮಹಮ್ಮದ್ ಇಮ್ರಾನ್, ಹರೀಶ್, ಬಿ.ಎ.ರಾಜೀವ್, ಆರ್.ಧನಂಜಯ, ಎನ್.ಎಸ್.ವರುಣ, ಆರ್.ರವಿ, ರೂಪಾ ದೇವಿ, ಶೀಲಾ, ವಕೀಲರಾದ ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ್, ಉಮಾಪತಿ, ಚಿನ್ನಪ್ಪ, ಪ್ರತಾಪ್ಜೋಗಿ, ಹನುಮಂತಯ್ಯ ಇತರರಿದ್ದರು.