More

    ರಾಹುಲ್ ಗಾಂಧಿ ರಾವಣನಿಗೆ ಹೋಲಿಕೆ ಖಂಡನೆ

    ಯಾದಗಿರಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಹತ್ತು ತಲೆಯ ಚಿತ್ರ ಜೋಡಿಸಿ ರಾವಣನಿಗೆ ಹೋಲಿಕೆ ಮಾಡಿದ ಬಿಜೆಪಿಯ ಸಾಮಾಜಿಕ ಜಾಲತಾಣದ ವಿರುದ್ಧ ಸೋಮವಾರ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ನಿಂದ ಪ್ರತಿಭಟನೆ ನಡೆಸಲಾಯಿತು.

    ನಗರದ ಕಾಂಗ್ರೆಸ್ ಕಚೇರಿಯಿಂದ ಸುಭಾಶ್ಚಂದ್ರ ಬೋಸ್ ವೃತ್ತದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಕಾರ್ಯಕರ್ತರು ಬಿಜೆಪಿ ವಿರುದ್ಧ ಹರಿಹಾಯ್ದರು. ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಮಾತನಾಡಿ, ಜನರು ಅಧಿಕಾರ ನೀಡಿದ ವೇಳೆ ಅದನ್ನು ಸರಿಯಾಗಿ ಬಳಸಿಕೊಳ್ಳಲು ಆಗದ ಪಕ್ಷ ಇಂದು ನಮ್ಮ ನಾಯಕನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಮಾನ ಮಾಡುವ ಕೆಲಸಕ್ಕೆ ಕೈ ಹಾಕಿದೆ. ಬಿಜೆಪಿಯದ್ದು ಮೊದಲಿನಿಂದಲೂ ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುವ ಅಜಂಡಾ ಆಗಿದೆ ಎಂದು ಹರಿಹಾಯ್ದರು.

    ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮರಿಗೌಡ ಹುಲಕಲ್ ಮಾತನಾಡಿ, ಬಿಜೆಪಿ ಕೋಮುವಾದಿ ಪಕ್ಷ. ಸಮಾಜದಲ್ಲಿ ಸದಾ ಅಶಾಂತಿ ಮೂಡಿಸಿ, ತಮಾಷೆ ನೋಡುವುದನ್ನು ಕರಗತ ಮಾಡಿಕೊಂಡಿದೆ. ಭಾರತ್ ಜೋಡೊ ಪಾದಯಾತ್ರೆಯಿಂದ ರಾಹುಲ್ ಗಾಂಧಿ ಅವರ ವರ್ಚಸ್ಸು ದೇಶದಲ್ಲಿ ವೃದ್ಧಿಸಿದೆ. ಇದನ್ನು ಬಿಜೆಪಿಗೆ ಅರಗಿಸಿಕೊಳ್ಳಲು ಸಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕೇಸರಿ ಪಕ್ಷ ಎಷ್ಟೇ ತಂತ್ರಗಾರಿಕೆ ಮಾಡಿದರೂ ಕೇಂದ್ರದಲ್ಲಿ ಅಧಿಕಾರ ಹಿಡಿಯುವವರು ನಾವೇ. ಇನ್ನೂ ಸ್ವಲ್ಪ ದಿನ ಕಾದು ನೋಡಿ ಎಂದು ಸವಾಲು ಹಾಕಿದ ಹುಲಕಲ್ ಕೂಡಲೇ ಬಿಜೆಪಿ ಅವರು ರಾಹುಲ್ ಗಾಂಧಿಗೆ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts