ತಲಕಾಡು ಗ್ರಾಪಂ ಸಾಮಾನ್ಯ ಸಭೆಯಲ್ಲಿ ತೀರ್ಮಾನ
ತಲಕಾಡು: ರಸ್ತೆ ವಿಸ್ತರಣೆ ಸಂದರ್ಭ ಶೇ.80 ವಸತಿ ಕಳೆದುಕೊಳ್ಳುವವರಿಗೆ ಇಲ್ಲಿನ ಹಸ್ತಿಕೇರಿ ಮಠದ ಬಳಿ ಪಂಚಾಯಿತಿಗೆ ಸೇರಿದ ಗ್ರಾಮ ಠಾಣಾ ಜಾಗದಲ್ಲಿ ಉಚಿತವಾಗಿ ನಿವೇಶನ ಒದಗಿಸಿಕೊಡಲು ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಮಾಡಲಾಯಿತು. ಇದಲ್ಲದೇ, ಇಲ್ಲಿನ ಆಶ್ರಯ ಬಡಾವಣೆ ನಿವಾಸಿಗಳಿಗೆ ಮುಡುಕುತೊರೆ ಮುಖ್ಯ ರಸ್ತೆಯಿಂದ ಸಂಪರ್ಕ ರಸ್ತೆ ಕಲ್ಪಿಸಿಕೊಡುವ ಸಲುವಾಗಿ ಹೆಚ್ಚುವರಿ ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಲು ಸರ್ವೇ ನಡೆಸಲು ನಿರ್ಧರಿಸಲಾಯಿತು.
ಹಳೇತಲಕಾಡು ಪ್ರವೇಶಿಸುವ ಪ್ರವಾಸಿ ವಾಹನಗಳಿಂದ ಪ್ರವೇಶ ಶುಲ್ಕ ವಸೂಲು ಮಾಡಿಕೊಳ್ಳಲು, ಮುಂದಿನ ವರ್ಷ ಮಾರ್ಚ್ನಿಂದ ಪಂಚಾಯಿತಿ ವತಿಯಿಂದ ಹರಾಜು ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಪ್ರವೇಶ ಶುಲ್ಕ ವಸೂಲಾತಿಯಿಂದ ಸಂಗ್ರಹವಾಗುವ ಮೊತ್ತದಲ್ಲಿ ಗೇಟ್ ಬಳಿ ಪ್ರತ್ಯೇಕವಾಗಿ ಸುಸಜ್ಜಿತ ಎರಡು ಶೌಚಗೃಹಗಳ ನಿರ್ಮಾಣ, ಕುಡಿಯುವ ನೀರಿನ ಸೌಕರ್ಯ ಒದಗಿಸಿಕೊಡಲೂ ಸಭೆ ನಿರ್ಣಯಿಸಿತು.
2023-24 ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ಮೂಲಸೌಕರ್ಯ ಒದಗಿಸಿಕೊಡಲು ಸಿದ್ಧಪಡಿಸಿದ್ದ ಕ್ರಿಯಾಯೋಜನೆಗೆ ಸಭೆ ಅನುಮೋದನೆ ನೀಡಿತು. ಇದಲ್ಲದೆ ಇಲ್ಲಿನ ಗ್ರಾಮ ಪಂಚಾಯಿತಿ ನೂತನ ಕಟ್ಟಡ ನಿರ್ಮಾಣಕ್ಕೆ 15ಲಕ್ಷ ರೂ.ಗಳನ್ನು 15ನೇ ಹಣಕಾಸು ಯೋಜನೆಯಡಿ ಬಳಕೆ ಮಾಡಿಕೊಳ್ಳಲು ಸಭೆ ಅನುಮೋದನೆ ನೀಡಿತು.
ಸಭೆಯಲ್ಲಿ ಸಾರ್ವಜನಿಕರ ಅರ್ಜಿಗಳ ವಿಚಾರ ಸೇರಿದಂತೆ ಪಂಚಾಯಿತಿಯ ಜಮಾ-ಖರ್ಚಿನ ಬಗ್ಗೆ ಸಭೆಯ ಆರಂಭದಲ್ಲಿ ಸುದೀರ್ಘ ಚರ್ಚೆ ನಡೆಸಿತು. ಕಳೆದ ಬಾರಿ ಸದಸ್ಯರ ಕೋರಂ ಇಲ್ಲದೆ ಸಾಮಾನ್ಯ ಸಭೆ ಮುಂದೂಡಲಾಗಿತ್ತು. ಬಹುತೇಕ ಸದಸ್ಯರು ಪಾಲ್ಗೊಂಡು ಸಭೆ ಯಶಸ್ವಿಯಾಗಿ ನಡೆಯಲು ಸಹಕಾರ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಕೆಂಪಯ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಆಸ್ಮಿನ್ ನೌಷಾದ್ ಪಿಡಿಒ ಬಿ.ಎಲ್. ಶ್ರೀನಿವಾಸಮೂರ್ತಿ, ಕಾರ್ಯದರ್ಶಿ ರಾಜಶೇಖರ ಶೆಟ್ಟಿ ಇತರರು ಪಾಲ್ಗೊಂಡಿದ್ದರು.
ಚಿತ್ರಶೀರ್ಷಿಕೆ 1,2
1,2)
ತಲಕಾಡು ಗ್ರಾಪಂನಲ್ಲಿ ಪಂಚಾಯಿತಿ ಸಾಮಾನ್ಯ ಸಭೆ ಆಯೋಜಿಸಲಾಗಿತು. ಜಿ.ಕೆಂಪಯ್ಯ, ಆಸ್ಮಿನ್ನೌಷಾದ್, ಬಿ.ಎಲ್.ಶ್ರೀನಿವಾಸಮೂರ್ತಿ ಇದ್ದರು.