ಕುಣಿಗಲ್: ಎನ್ಡಿಎ ಸರ್ಕಾರದ ಜನವಿರೋಧಿ ನೀತಿಯಿಂದ ದೇಶ ದಿವಾಳಿ ಹಂತ ತಲುಪಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್ ಸೇರಿ ಅಗತ್ಯವಸ್ತುಗಳ ಬೆಲೆಯನ್ನು ಎದ್ವಾತದ್ವ ಏರಿಕೆ ಮಾಡಿ ಸಾಮಾನ್ಯ ಜನರನ್ನು ಬೀದಿಗೆ ತಳ್ಳಿದೆ ಎಂದು ಶಾಸಕ ಡಾ. ಎಚ್.ಡಿ. ರಂಗನಾಥ್ ಆರೋಪಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಗತ್ಯವಸ್ತುಗಳ ಬೆಲೆ ಏರಿಕೆ ಖಂಡಿಸಿ ಕುಣಿಗಲ್ ತಾಲೂಕು ಯುವ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರ ಬಳಿ ಏರ್ಪಡಿಸಿದ್ದ ಎತ್ತಿನಗಾಡಿ ಜಾಥಾದಲ್ಲಿ ಮಾತನಾಡಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್. ಲೋಹಿತ್ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಬೆಲೆಗಳು ಗಗನಕ್ಕೇರಿವೆ. ಇದನ್ನು ಮುಚ್ಚಿ ಹಾಕಲು ಕೋಮುಗಲಭೆ ಸೃಷ್ಟಿಸಿ, ಸಹೋದರಂತೆ ಬದುಕುತ್ತಿದ್ದ ಹಿಂದು, ಮುಸ್ಲಿಂಮರ ಮಧ್ಯೆ ಧರ್ಮದ ವಿಷ ಬೀಜ ಬಿತ್ತಿ ರಾಜ್ಯದಲ್ಲಿ ಅಶಾಂತಿ ಮೂಡಿಸಲಾಗಿದೆ ಎಂದರು.
ಯುವ ಕಾಂಗ್ರೆಸ್ ಟೌನ್ ಅಧ್ಯಕ್ಷ ಕೆ.ಆರ್. ಮಾರುತಿ ಮಾತನಾಡಿ, ಡಾ. ಮನಮೋಹನ್ಸಿಂಗ್ ಅವರ ಆಡಳಿತ ಅವಧಿಯಲ್ಲಿ 350ರಿಂದ 400 ರೂ. ಇದ್ದ ಅಡುಗೆ ಅನಿಲ ಸಿಲಿಂಡರ್ ಬೆಲೆ ಇತ್ತು. ಜತೆಗೆ ಸಹಾಯಧನ ನೀಡಲಾಗುತ್ತಿತ್ತು. ಪೆಟ್ರೋಲ್ ಲೀಟರ್ಗೆ 60 ರೂ., ಡೀಸೆಲ್ಗೆ 42 ರೂ., ದರ ಇತ್ತು. ಈ ದರಗಳೇ ಹೆಚ್ಚು ಎಂದು ಆಗ ಬಿಜೆಪಿ ಮುಖಂಡರು ಬೊಬ್ಬೆ ಹೊಡೆದು ದೇಶಾದ್ಯಂತ ಬೀದಿಗಿಳಿದು ಪ್ರತಿಭಟನೆ ಮಾಡಿದ್ದರು. ಅಲ್ಲದೆ, ತಾವು ಅಧಿಕಾರಕ್ಕೆ ಬಂದರೆ 50 ರೂ.ಗೆ ಪೆಟ್ರೋಲ್, 30 ರೂ.ಗೆ ಡೀಸೆಲ್ ಕೊಡುವುದಾಗಿ ಹೇಳಿದ್ದರು. ಆದರೆ, ಈಗ ಬೆಲೆಯನ್ನು ಹೆಚ್ಚಿಸಿ, ಜನರಿಗೆ ಮೋಸ ಮಾಡಿದ್ದಾರೆ. ಎಂಟು ವರ್ಷದ ಬಿಜೆಪಿ ಆಡಳಿತದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 112 ರೂ., ಡೀಸಲ್ 108 ರೂ., ಆಗಿದೆ, ಅಡುಗೆ ಅನಿಲ ಸಿಲಿಂಡರ್ ಬೆಲೆ ಸಾವಿರ ರೂಪಾಯಿ ತಲುಪಿದೆ. ಇದೇನಾ ಅಚ್ಚೇದಿನ್ ಎಂದು ಪ್ರಶ್ನಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಎನ್. ಹುಚ್ಚಮಾಸ್ತಿಗೌಡ ಸರ್ಕಲ್ನವರೆಗೆ ಎತ್ತಿನ ಗಾಡಿ ಜಾಥಾ ಮಾಡಲಾಯಿತು. ಅಡುಗೆ ಅನಿಲದ ಖಾಲಿ ಸಿಲಿಂಡರ್, ಬೈಕ್ಗಳ ಅಣಕು ಶವಯಾತ್ರೆ ಮಾಡಲಾಯಿತು.
ಮುಖಂಡರಾದ ನಿಶಾಂತ್, ಮಹೇಂದ್ರ, ಅರುಣ್, ಹನುಮಂತು, ವಿಜಿ, ಹರೀಶ್, ಜೀವನ್, ಸಂತೋಷ್ ಇತರರಿದ್ದರು.
ಕಾಂಗ್ರೆಸ್ ಆಡಳಿತದಲ್ಲಿ ಬಡತನ ನಿಮೂರ್ಲನೆ, ನೀರಾವರಿ, ವಿದ್ಯುತ್, ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ಬಾಹ್ಯಕಾಶದಲ್ಲಿ ಸಾಧನೆ, ಆಹಾರ ಭದ್ರತೆಯಲ್ಲಿ ದೇಶ ಗಣನೀಯ ಸಾಧನೆ ಮಾಡಿತ್ತು. ಆದರೆ ಬಿಜೆಪಿ ಸರ್ಕಾರ ಶೂನ್ಯ ಸೇವೆ ನೀಡಿ ಜನರ ಜೀವನದಲ್ಲಿ ಆಟವಾಡುತ್ತಿದೆ.
> ಡಾ. ಎಚ್.ಡಿ. ರಂಗನಾಥ್ ಶಾಸಕ