ಪಿರಿಯಾಪಟ್ಟಣ: ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಬಿಜೆಪಿ ಮುಖಂಡನ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ತಾಲೂಕಿನ ಮಹಿಳೆಯ ದೂರದ ಸಂಬಂಧಿಕರಾಗಿರುವ ನೇರಳೆಕುಪ್ಪೆ ನವೀನ್ ಎಂಬಾತ ಮಹಿಳೆಯ ಪತಿಗೆ ಅವರ ಮನೆಯಲ್ಲೇ ಮದ್ಯಪಾನ ಮಾಡಿಸಿ, ಎಚ್ಚರ ತಪ್ಪಿದ ನಂತರ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಪಟ್ಟಣದ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಆ.7 ರಂದು ಮುತ್ತೂರು ಗ್ರಾಮದಲ್ಲಿ ಮಹಿಳೆಯ ಮನೆಯಲ್ಲಿ ಘಟನೆ ನಡೆದಿದ್ದು, ನವೀನ್ ಸಂಬಂಧಿಕರಾಗಿರುವುದರಿಂದ ರಾಜಿಸಂಧಾನ ಮಾಡಿಸೋಣ ಎಂದು ಮಹಿಳೆಯನ್ನು ಸಮಾಧಾನಪಡಿಸಿದ್ದರು. ಯಾವುದೇ ಕ್ರಮ ಕೈಗೊಳ್ಳದ ಕಾರಣ ಶುಕ್ರವಾರ ಪೊಲೀಸ್ ಠಾಣೆಗೆ ತಡವಾಗಿ ದೂರು ನೀಡಿರುವುದಾಗಿ ಸಂತ್ರಸ್ತೆ ತಿಳಿಸಿದ್ದಾರೆ.
ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ನೇರಳೆಕುಪ್ಪೆ ನವೀನ್, ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಡಾ.ಪ್ರಕಾಶ್ಬಾಬು ಅವರಿಗೆ ಬ್ಲಾೃಕ್ಮೇಲ್ ಮಾಡಿ 25 ಲಕ್ಷ ರೂ. ಸುಲಿಗೆ ಮಾಡಿದ ಆರೋಪದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿ ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ.