ಬೀದರ್: ಕರೊನಾ ಸೋಂಕು ವ್ಯಾಪಕ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಸ್ಲಿಮರು ಪವಿತ್ರ ರಂಜಾನ್ ಹಬ್ಬವನ್ನು ಮನೆಯಲ್ಲೇ ಆಚರಿಸುವುದು ಅನಿವಾರ್ಯ. ಪ್ರಾರ್ಥನೆ, ಉಪವಾಸ, ಇಫ್ತಾರ್ಗಳನ್ನು ಮನೆಯಲ್ಲೇ ಆಚರಿಸಿ ದೇಶವನ್ನು ಕರೊನಾ ಸಂಕಷ್ಟದಿಂದ ಪಾರಾಗಲು ಅಲ್ಲಾಹುನಲ್ಲಿ ಪ್ರಾರ್ಥಿಸಿ ಎಂದು ಪಶು ಸಂಗೋಪನೆ, ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಮನವಿ ಮಾಡಿದ್ದಾರೆ. ರಂಜಾನ್ ತಿಂಗಳಲ್ಲಿ ಉಪವಾಸ ಮಾಡುವುದು ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಒಂದು. ವಿಶ್ವಾದ್ಯಂತ ಮುಸ್ಲಿಮರಿಗೆ ರಂಜಾನ್ ಅತ್ಯಂತ ಆಶೀರ್ವದಿತ ಹಾಗೂ ದೇವರು ಕೃಪೆ ಮಾಡುವ ತಿಂಗಳು ಎಂದು ಪರಿಗಣಿಸಲಾಗುತ್ತದೆ. ಸದ್ಯ ಕರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಧಾರ್ಮಿಕ, ಪೂಜಾ ಸ್ಥಳಗಳನ್ನು ಮುಚ್ಚಲಾಗಿದೆ. ಸೋಂಕು ತಡೆಗಟ್ಟುವ ಕಾರಣದಿಂದ ಧಾರ್ಮಿಕ ಸಭೆ, ಸಮಾರಂಭಗಳನ್ನು ನಿಷೇಧಿಸಲಾಗಿದೆ. ಕೇಂದ್ರ ಸರ್ಕಾರದ ವಕ್ಫ್ ಕೌನ್ಸಿಲ್, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ನೀಡಿದ ನಿರ್ದೇಶನದಂತೆ ರಂಜಾನ್ ತಿಂಗಳಲ್ಲಿ ಸಾಮೂಹಿಕವಾಗಿ ಸಭೆ ಸೇರುವುದು, ಪ್ರಾರ್ಥನೆ, ಮಜ್ಲಿಸ್, ಮಸೀದಿಯಲ್ಲಿ ಇಫ್ತಾರ್ ನಿಷೇಧಿಸಿದೆ. ಇದಕ್ಕೆ ಸಂಬಂಧಪಟ್ಟಂತೆ ರಾಜ್ಯ ವಕ್ಫ್ ಮಂಡಳಿಯಿಂದ ಆದೇಶ ಸಹ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ. ಶುಕ್ರವಾರದ ನಮಾಜ್ ಯಾವ ಕಾರಣಕ್ಕೂ ಮಸೀದಿಗೆ ತೆರಳಿ ಸಾಮೂಹಿಕವಾಗಿ ಮಾಡಬಾರದು. ಮಸೀದಿಯಲ್ಲಿರುವ ಪೇಶ್ ಇಮಾಮ್ಸ್, ಮೌಜನ್ಸ್ ಹಾಗೂ ಸಿಬ್ಬಂದಿ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಮಾಡಬೇಕು. ರಾಜ್ಯದ ಎಲ್ಲ ಮಸೀದಿಗಳಲ್ಲಿ ರಂಜಾನ್ಗೆ ಸಂಬಂಧಪಟ್ಟ ಪ್ರಾರ್ಥನೆ, ಸಹ್ರಿ, ಉಪವಾಸ ಹಾಗೂ ಇಫ್ತಾರ್ ಮನೆಯಲ್ಲೇ ಮಾಡಬೇಕು. ಕರೊನಾ ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಹಸ್ತಲಾಘವ, ತಬ್ಬಿಕೊಂಡು ಶುಭ ಕೋರುವುದನ್ನು ಸಹ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.