ಸುಂಟಿಕೊಪ್ಪ: ನಲ್ಲೂರು ತೋಟದ ಕೂಲಿ ಕಾರ್ಮಿಕ ವಿಜಯ್ಕುಮಾರ್ ಅವರ ಮೇಲೆ ಬುಧವಾರ ಕಾಡಾನೆ ದಾಳಿಯಾಗಿ ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ಗೌಡ ಅವರು ಬುಧವಾರ ಮಧ್ಯರಾತ್ರಿ ಆಸ್ಪತ್ರೆಗೆ ತೆರಳಿ ಗಾಯಾಳು ಯೋಗ ಕ್ಷೇಮ ವಿಚಾರಿಸಿ ಧೈರ್ಯ ತುಂಬಿದರು.
ಕೊಡಗು ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಪರಿಣಾಮ ಕೆಲವು ಕಡೆ ಪ್ರವಾಹ, ಬರೆ ಕುಸಿತ ಪ್ರಕರಣಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವ ಭೋಸರಾಜು ಅವರು ಬುಧವಾರ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಇವರೊಂದಿಗೆ ಶಾಸಕ ಡಾ. ಮಂತರ್ಗೌಡ ಅವರೂ ಇದ್ದರು.
ರಾತ್ರೋರಾತ್ರಿ ಆಸ್ಪತ್ರೆಗೆ ತೆರಳಿದ ಡಾ.ಮಂತರ್ಗೌಡ ಅವರು ಆನೆ ದಾಳಿಗೆ ಒಳಗಾದ ಗಾಯಾಳುವನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಗಾಯಾಳುವಿನ ಕುಟುಂಬದವರಿಗೆ ಬೆಡ್ ಶೀಟ್, ಊಟದ ವ್ಯವಸ್ಥೆ ಮಾಡುವ ಮೂಲಕ ಸ್ಪಂದಿಸಿದರು. ಅಲ್ಲದೆ ತುರ್ತು ಚಿಕಿತ್ಸೆಗೆ 10 ಸಾವಿರ ರೂ. ನೆರವು ನೀಡಿದರು.
ಆಸ್ಪತ್ರೆ ವೈದ್ಯರೊಂದಿಗೆ ಮಾತುಕತೆ ನಡೆಸಿ ಗಾಯಾಳು ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ಗಾಯಾಳುವಿಗೆ ಶ್ವಾಸಕೋಶದ ಭಾಗದಲ್ಲಿ ಹೆಚ್ಚಿನ ಪೆಟ್ಟಾಗಿದ್ದು, ಚಿಕಿತ್ಸೆಯ ಮೂಲಕ ಗುಣಮುಖರಾಗಲಿದ್ದಾರೆ. ಯಾವುದೇ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಆಸ್ಪತ್ರೆಯಲ್ಲಿದ್ದ ಕುಟುಂಬದವರಿಗೆ ಧೈರ್ಯ ತುಂಬಿದರು.