ಹುಬ್ಬಳ್ಳಿ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ವಣಕ್ಕೆ ಶಂಕುಸ್ಥಾಪನೆಯಾದ ನಂತರ ಕಾಂಗ್ರೆಸ್ನವರು ಹಿಂದುಗಳ ಪರವಾಗಿರಬೇಕೊ ಅಥವಾ ಅಲ್ಪಸಂಖ್ಯಾತರ ಪರವಾಗಿ ಮಾತನಾಡಬೇಕೊ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡಿದ ಅವರು, ರಾಮ ಮಂದಿರದ ಪರವಾಗಿದ್ದರೆ ಅಲ್ಪಸಂಖ್ಯಾತರ ಮತಗಳನ್ನು ಕಳೆದುಕೊಳ್ಳುವ ಹಾಗೂ ವಿರೋಧವಾಗಿದ್ದರೆ ಬಹುಸಂಖ್ಯಾತ ಹಿಂದುಗಳ ಮತಗಳು ಕೈಬಿಟ್ಟುಹೋಗುವ ಆತಂಕ ಕಾಂಗ್ರೆಸ್ಗೆ ಕಾಡುತ್ತಿದೆ ಎಂದು ವ್ಯಂಗ್ಯವಾಡಿದರು.
ರಾಮ ಕಾಲ್ಪನಿಕ ಎಂದು ಹೇಳಿದ್ದ ಕಾಂಗ್ರೆಸ್ ಮುಖಂಡರು, ಮಂದಿರ ನಿರ್ವಣದ ಬಗ್ಗೆ ತೀರ್ಪು ನೀಡದಂತೆ ಸುಪ್ರೀಂ ಕೋರ್ಟ್ಅನ್ನು ಆಗ್ರಹಿಸಿದ್ದರು. ಮಂದಿರ ನಿರ್ಮಾಣ ಹೋರಾಟದ ಮುಂಚೂಣಿಯಲ್ಲಿದ್ದವರ ಮೇಲೆ ಪ್ರಕರಣ ದಾಖಲಿಸಿದ್ದರು ಎಂದು ದೂರಿದರು. ಪ್ರತಿ ಬೆಳವಣಿಗೆಯನ್ನೂ ಮತಬ್ಯಾಂಕ್ ಆಧಾರವನ್ನಾಗಿ ಕಾಂಗ್ರೆಸ್ನವರು ಪರಿಗಣಿಸು
ತ್ತಾರೆ. ಮತಬ್ಯಾಂಕ್ ಮತ್ತು ಅಧಿಕಾರ ಕಾಂಗ್ರೆಸ್ನ ಡಿಎನ್ಎಯಲ್ಲೇ ಇದೆ. ಅಧಿಕಾರ ಇಲ್ಲದೇ ಅವರು ಹತಾಶರಾಗಿದ್ದಾರೆ ಎಂದರು.
ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಇತ್ತು, ಮುಂದೆಯೂ ಇರಲಿದೆ ಎಂದಿರುವ ಸಂಸದ ಅಸಾವುದ್ದೀನ್ ಓವೈಸಿ ಹೇಳಿಕೆಗೆ ಮಹತ್ವ ಕೊಡಬೇಕಾಗಿಲ್ಲ. ಈ ವಿಷಯದಲ್ಲಿ ಕಾಂಗ್ರೆಸ್ ಮತ್ತು ಓವೈಸಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಹೇಳಿದರು.
ಮಥುರಾ, ಕಾಶಿಯಲ್ಲಿ ಮಂದಿರ ನಿರ್ವಣದ ಬಗ್ಗೆ ಉತ್ತರ ನೀಡಲು ನಿರಾಕರಿಸಿದ ಸಚಿವ ಜೋಶಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಬಿಜೆಪಿಯ ಗುರಿ ಆಗಿತ್ತು. ಅದು ಈಗ ಈಡೇರುತ್ತಿದೆ ಎಂದಷ್ಟೇ ಹೇಳಿದರು.