ಹಾಸನ: ಕಳೆದ ಚುನಾವಣೆಗಳಲ್ಲಿ ಕಡಿಮೆ ಮತದಾನವಾಗಿರುವ ಪ್ರದೇಶಗಳಲ್ಲಿ ಮತದಾನ ದಿನವನ್ನು ಮತದಾರರ ಮನದಲ್ಲಿ ಸ್ಮರಣೀಯವಾಗಿಸಲು ಅವರ ಮನೆ ಬಾಗಿಲಿಗೆ ಮತದಾನ ದಿನಾಂಕದ ಸ್ಟಿಕ್ಕರ್ ಅಂಟಿಸುವ ಕಾರ್ಯಕ್ರಮಕ್ಕೆ ಮಂಗಳವಾರ ನಗರದಲ್ಲಿ ಚಾಲನೆ ನೀಡಲಾಯಿತು.
ಜಿಲ್ಲಾ ಪಂಚಾಯತಿ ಸ್ವೀಪ್ ಸಮಿತಿ, ನಗರಸಭೆ ವತಿಯಿಂದ ಶೇ. 45-50ರಷ್ಟು ಮತದಾನವಾಗಿರುವ ಆಡುವಳ್ಳಿ, ಕುವೆಂಪುನಗರ, ಸಾಲಾಗಮೆ, ಉತ್ತರ ಬಡಾವಣೆ, ಉದಯಗಿರಿ ಬಡಾವಣೆ, ಸರಸ್ವತಿಪುರಂ, ವಿದ್ಯುತ್ ನಗರ, ವಿದ್ಯಾ ನಗರಗಳಲ್ಲಿ ಮನೆ ಮನೆಗೆ ತೆರಳಿ ಸ್ಟಿಕರ್ ಅಂಟಿಸಲಾಯಿತು.
ಹಾಸನ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್ ಪೂರ್ಣಿಮಾ ಅವರು ಮನೆ ಮನೆಗೆ ತೆರಳಿ ಸ್ಟಿಕ್ಕರ್ ಅಂಟಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಟಿ ಶಾಂತಲಾ, ನಗರಸಭೆ ಪೌರಾಯುಕ್ತ ಸಿ.ಯೋಗಾನಂದ , ಜಿಲ್ಲಾ ಪಂಚಾಯತಿಯ ಯೋಜನಾಧಿಕಾರಿ ಪರಪ್ಪಸ್ವಾಮಿ, ನಗರಸಭೆಯ ಪರಿಸರ ಅಧಿಕಾರಿ ಕೆ.ಆರ್.ವೆಂಕಟೇಶ್, ಸಹಾಯಕ ಕಾರ್ಯ ಅಭಿಯಂತರ ರಂಗಸ್ವಾಮಿ, ಆರೋಗ್ಯ ನಿರೀಕ್ಷಕ ಪ್ರಸಾದ್, ಆನಂದ್, ಚೇತನ ಹಾಜರಿದ್ದರು. ಕಾರ್ಯಕ್ರಮದಲ್ಲಿ ಜಾಗೃತಿ ಹಾಡುಗಳು ಮತ್ತು ಬೀದಿ ನಾಟಕ ಪ್ರದರ್ಶನವನ್ನು ನಡೆಸಲಾಯಿತು.