ಹೊಸಕೋಟೆ: ರೈತರ ಮಕ್ಕಳು ಉನ್ನತ ವಿದ್ಯಾಭ್ಯಾಸ ಮಾಡುವ ಮೂಲಕ ಸಾಧನೆ ಮಾಡಿ ಪಾಲಕರಿಗೆ ಆಶಾಕಿರಣವಾಗಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ತಿರುಮಶಟ್ಟಿಹಳ್ಳಿಯ ಖಾಸಗಿ ಸಭಾಂಗಣದಲ್ಲಿ ಶನಿವಾರ ಬೆಂಗಳೂರು ಸಹಕಾರ ಹಾಲು ಒಕ್ಕೂಟ, ಬಮುಲ್ ಕಲ್ಯಾಣ ಟ್ರಸ್ಟ್ ಹಾಗೂ ಬೆಂಗಳೂರು ಪೂರ್ವ ಶಿಬಿರ ಕಚೇರಿ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಕ್ರಿಯ ಹಾಲು ಉತ್ಪಾದಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅನುಗೊಂಡನಹಳ್ಳಿ ಹೋಬಳಿಯ 1200 ಕುಟುಂಬಗಳು ಹೈನುಗಾರಿಕೆ ಅವಲಂಬಿಸಿ ಜೀವನ ಕಟ್ಟಿಕೊಂಡಿವೆ. 3 ವರ್ಷಗಳಲ್ಲಿ ರೈತರ ಅಭ್ಯುದಯಕ್ಕಾಗಿ 1.72 ಲಕ್ಷ ರೂ. ಅನುದಾನ ನೀಡಲಾಗಿದೆ. ಪ್ರಸ್ತುತ ಪರಿಸ್ಥಿತಿ ಅನುಸಾರ ಬಮುಲ್ ನೀಡುತ್ತಿರುವ ಹಾಲಿನ ದರ ಸಾಕಾಗುತಿಲ್ಲ. ಇನ್ನೂ 5 ರೂ. ಹೆಚ್ಚಿಸಿ ದರ ನಿಗದಿಪಡಿಸಲು ನಿರ್ದೇಶಕರು ಆಡಳಿತ ಮಂಡಳಿಯ ಮೇಲೆ ಒತ್ತಡ ಹಾಕಿ ರೈತರ ಶ್ರೇಯೋಭಿವೃದ್ಧಿಗೆ ಸಹಕರಿಸಬೇಕು ಎಂದರು.
ಲಾಕ್ಡೌನ್ ವೇಳೆ ನನ್ನ ಮನವಿಗೆ ಸ್ಪಂದಿಸಿದ ಬಮುಲ್ ಹಾಗೂ ತಾಲೂಕು ಹಾಲು ಒಕ್ಕೂಟ ತಾಲೂಕಿನ ಪ್ರತಿ ಗ್ರಾಮದಲ್ಲಿ ಬ್ಲೀಚಿಂಗ್, ಹೈಪಾಕ್ಸಿ ಕ್ಲೋರೈಡ್ ಸಿಂಪಡಿಸುವ ಮೂಲಕ ಕರೊನಾ ನಿಯಂತ್ರಣಕ್ಕೆ ಸಹಕರಿಸಿತು. ಜತೆಗೆ ಲಸಿಕೆ ಕೊರತೆಯಾದಾಗ ಉಚಿತವಾಗಿ ಲಸಿಕೆ ನೀಡುವ ಮೂಲಕ ಈ ಬಾಗದ ಜನರಿಗೆ ನೆರವಾಯಿತು ಎಂದರು.
ಬಮುಲ್ ನಿರ್ದೇಶಕ ಕೆಎಂಎಂ ಮಂಜುನಾಥ್ ಮಾತನಾಡಿ, ಲಾಕ್ಡೌನ್ನಿಂದ ಬಮುಲ್ ಸಂಕಷ್ಟದಲ್ಲಿದ್ದಾಗ ರೈತರು ಬಮುಲ್ಗೆ ಶಕ್ತಿ ತುಂಬಿದ್ದರು. ಈಗ ಬಮುಲ್ ಹಂತ ಹಂತವಾಗಿ ಚೇತರಿಸಿಕೊಳ್ಳುತ್ತಿದೆ. ಹೈನುಗಾರಿಕೆ ನಂಬಿರುವ ರೈತರಿಗೆ ಸದಾ ಬೆನ್ನೆಲುಬಾಗಿ ನಿಲ್ಲುತ್ತದೆ. ಹೈನುಗಾರಿಕೆ ಮತ್ತು ಸಹಕಾರ ಸಂಘಗಳ ಬಟವಾಡೆಯನ್ನೇ ನಂಬಿರುವ ರೈತರಿಗೆ ಪ್ರತಿಭಾ ಪುರಸ್ಕಾರದ ಪ್ರೋತ್ಸಾಹ ಧನ ನೆರವಾಗಲಿದೆ ಎಂದರು.
64 ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂ. ಚೆಕ್ನೀಡಿ ಸನ್ಮಾನಿಸಲಾಯಿತು. ಮುಖಂಡರಾದ ಕೋಡಿಹಳ್ಳಿ ಸುರೇಶ್, ಬೋಧನಹೊಸಳ್ಳಿ ಪ್ರಕಾಶ್, ಸಮೇತನಹಳ್ಳಿ ಸೊಣ್ಣಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಹೋರೋಹಳ್ಳಿ ದೇವರಾಜ್, ಮಾನವ ಹಕ್ಕುಗಳ ಜಾಗೃತಿ ಸಮಿತಿ ಅಧ್ಯಕ್ಷ ಲಕ್ಷ್ಮಣ್ ಸಿಂಗ್, ಉದ್ಯಮಿ ಅಶ್ರಫ್ ಬೇರಿ ಇತರರು ಇದ್ದರು.