ಚಿಕ್ಕಬಳ್ಳಾಪುರ : ಕರೊನಾ ಸೋಂಕಿನ ಚಿಕಿತ್ಸೆಯಲ್ಲಿ ಅಲೋಪಥಿ ಜತೆಗೆ ಆಯುರ್ವೇದ ಪದ್ಧತಿಯು ಒಳ್ಳೆಯ ಪರಿಣಾಮ ಬೀರುವ ವಿಶ್ವಾಸವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ.ಸುಧಾಕರ್ ತಿಳಿಸಿದರು.
ತಾಲೂಕಿನ ವರಮಲ್ಲೇನಹಳ್ಳಿಯಲ್ಲಿ 8 ಕೋಟಿ ರೂ ವೆಚ್ಚದ 50 ಹಾಸಿಗೆಗಳನ್ನೊಳಗೊಂಡ ಆಯುಷ್ ಆಸ್ಪತ್ರೆ ನಿರ್ಮಾಣಕ್ಕೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕರೊನಾ ಸೋಂಕು ನಿಯಂತ್ರಣದಲ್ಲಿದೆ. ನಿರ್ದಿಷ್ಟ ಲಸಿಕೆ ಕಂಡು ಹಿಡಿಯುವ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ. ಕೆಲವು ಕ್ಲಿನಿಕಲ್ ಟ್ರಯಲ್ ಹಂತದಲ್ಲಿದೆ. ಇನ್ನು ಅಲೋಪಥಿಯ ಜತೆಗೆ ಆಯುರ್ವೇದಲ್ಲೂ ಸಂಶೋಧನೆ ಸಾಗಿದೆ. ನಿಯಮಾನುಸಾರ ಪರೀಕ್ಷೆಯಲ್ಲಿ ಯಶಸ್ವಿಯಾದ ಬಳಿಕ ಬಳಕೆಯ ನಿರ್ಧಾರ ಕೈಗೊಳ್ಳಬಹುದು ಎಂದರು.
ವಿಶ್ವಸಂಸ್ಥೆಯ ಸೂಚನೆ ಹಿನ್ನೆಲೆಯಲ್ಲಿ ಕರೊನಾ ಸೋಂಕಿನ ಚಿಕಿತ್ಸೆಯಲ್ಲಿ ಹೈಡ್ರೋ ಕ್ಲೋರೈಡ್ ಮಾತ್ರೆ ಬಳಕೆ ನಿಲ್ಲಿಸಲಾಗಿದೆ. ಇದನ್ನು ಹಿಂದೆ ರೋಗಿಗಳಿಗೆ ನೀಡಲು ಸಲಹೆ ನೀಡಿತ್ತು. ಆದರೆ, ಈಗ ಅದರ ಹೊಸ ಮಾರ್ಗಸೂಚಿ ಪಾಲಿಸಲಾಗುತ್ತಿದೆ ಎಂದರು.ಕರೊನಾ ಸೋಂಕು ಪೊಲೀಸರಿಗೆ ಬಂದಿರುವುದರಲ್ಲಿ ಯಾವುದೇ ವಿಶೇಷವಿಲ್ಲ. ಇದು ಯಾವುದೇ ಜಾತಿ, ಮತ ಭೇದ ಭಾವ, ವೃತ್ತಿಯನ್ನು ನೋಡದೇ ಮನುಷ್ಯರಿಗೆಲ್ಲರಿಗೂ ಬರುತ್ತದೆ. ಇದಕ್ಕೆ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು ಎಂದರು.
ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ : ಜಿಲ್ಲಾಡಳಿತ ಭವನದಲ್ಲಿ 2019-20ನೇ ಸಾಲಿನ ಜಿಪಂನ ಶೇ.5% ಅನುದಾನದಲ್ಲಿ ಆಯ್ಕೆಯಾದ 24 ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಲಾಯಿತು.
ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಸಿಇಒ ಬಿ. ಫೌಜಿಯಾ ತರನ್ನುಮ್, ಸದಸ್ಯ ಕೆ.ಎಂ.ಮುನೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಉಪವಿಭಾಗಾಧಿಕಾರಿ ಎನ್.ಎನ್.ರಘುನಂದನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎನ್ ನಾರಾಯಣಸ್ವಾಮಿ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜ್ಯೋತಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಶುಹಾಬುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.