ಮೈಸೂರು : ತಲಕಾಡು ಹೋಬಳಿ ಭಾಗದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಭತ್ತ ನಾಟಿಗೆ ಅಡಚಣೆ ಉಂಟಾಗಿದೆ.
ಈಗಾಗಲೇ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗದ್ದೆಗಳಲ್ಲಿ ಭತ್ತದ ನಾಟಿ ಬಿರುಸಿನಿಂದ ಸಾಗಿದ್ದರೆ, ತಲಕಾಡು ವಡೆಯಾಂಡಹಳ್ಳಿ ಸುತ್ತ ಈಗಷ್ಟೇ ಬಿರುಸುಗೊಂಡಿದೆ. ಬಿ.ಶೆಟ್ಟಹಳ್ಳಿ ಹಾಗೂ ಹೊಳೆಸಾಲು ಪಂಚಾಯಿತಿ ಸುತ್ತ ಭತ್ತದ ಒಟ್ಟಲು ಮನೆಗಳಲ್ಲಿ ಬಿತ್ತನೆ ಚಟುವಟಿಕೆ ಭರದಿಂದ ಸಾಗಿದೆ.
ತಲಕಾಡು ಹಾಗೂ ಹಳೇಕುಕ್ಕೂರು ಭಾಗದ ಸಾಕಷ್ಟು ರೈತರು, ಈ ಬಾರಿ ಭತ್ತದ ಸಸಿ ನಾಟಿ ಮಾಡುವ ಚಟುವಟಿಕೆ ಸ್ಥಗಿತಗೊಳಿಸಿ, ನೇರವಾಗಿ ಭೂಮಿಗೆ ಬಿತ್ತನೆ ಭತ್ತವನ್ನು ಚೆಲ್ಲುವ ಕೃಷಿ ಪದ್ಧತಿ ಅನುಸರಿಸುತ್ತಿದ್ದಾರೆ. ಇದೀಗ ನಿರಂತರ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ನೇರವಾಗಿ ಭತ್ತ ಚೆಲ್ಲುವ ಪದ್ಧತಿಗೆ ಕಂಟಕಪ್ರಾಯವಾಗಿದ್ದು, ಕಳೆದ ವಾರ ಬಿತ್ತನೆ ಮಾಡಿದ್ದ ಬೀಜ ಹಾಳಾಗುವಂತಾಗಿದೆ. ಗದ್ದೆಗಳು ಅಧಿಕ ನೀರಿನಿಂದ ಮುಳುಗಿ ಹೋಗಿವೆ. ಗದ್ದೆಗಳಲ್ಲಿ ತುಂಬಿರುವ ಹೆಚ್ಚುವರಿ ನೀರನ್ನು ಹೊರಗೆ ಸಾಗಿಸಲು ರೈತರು ಶ್ರಮವಹಿಸಿದ್ದಾರೆ.