ವಿಜಯಪುರ: ಬಬಲೇಶ್ವರ ವಿಧಾನ ಸಭೆ ಕ್ಷೇತ್ರದ ಬಹುದಿನದ ಬೇಡಿಕೆಗಳಿಗೆ ರಾಜ್ಯ ಬಿಜೆಪಿ ಸರ್ಕಾರ ಮನ್ನಣೆ ನೀಡುತ್ತಿದ್ದು ಅಭಿವೃದ್ಧಿ ಕಾಮಗಾರಿಗಳಿಗೆ ಪಕ್ಷಾತೀತವಾಗಿ ಅನುದಾನ ಬಿಡುಗಡೆ ಮಾಡುತ್ತಿದೆ ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ತಿಳಿಸಿದ್ದಾರೆ.
ಬಬಲೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಿದ್ದರೂ ಜನರ ಕಲ್ಯಾಣಕ್ಕಾಗಿ ರಾಜಕೀಯ ಬದಿಗೊತ್ತಿ ಅಭಿವೃದ್ಧಿ ಕಾರ್ಯಕ್ಕೆ ಮುನ್ನುಡಿ ಬರೆಯುತ್ತಿದೆ. ಇದಕ್ಕೆ ಪೂರಕವೆಂಬಂತೆ ನನ್ನ ಮನವಿ ಮೇರೆಗೆ ಬಬಲೇಶ್ವರ ವಿಧಾನ ಸಭೆ ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಭೂಮಿ ಪೂಜೆ ನೆರವೇರುತ್ತಿದ್ದಾರೆ. ಬಬಲೇಶ್ವರ ರಸ್ತೆಯಲ್ಲಿ ಕಿಮೀ 15ರಿಂದ 21ರವರೆಗೆ ರಸ್ತೆ ಅಗಲೀಕರಣ ಹಾಗೂ ಸುಧಾರಣೆ ಕಾಮಗಾರಿ ಅಂದಾಜು ಮೊತ್ತ 495 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ತನ್ನಿಮಿತ್ತ ನ. 23 ರಂದು ಬೆಳಗ್ಗೆ 10ಕ್ಕೆ ಕಾರಜೋಳ ಗ್ರಾಮದಲ್ಲಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದವರು ತಿಳಿಸಿದ್ದಾರೆ.
ನನ್ನ ಬಹುದಿನಗಳ ಮನವಿಗೆ ಸ್ಪಂದಿಸಿ ಕಾಮಗಾರಿಗೆ ಚಾಲನೆ ನೀಡುತ್ತಿರುವುದು ಸಂತಸ ತಂದಿದೆ. ಅಲ್ಲದೇ, ಇನ್ನೂ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುವ ಭರವಸೆ ಡಿಸಿಎಂ ಗೋವಿಂದ ಕಾರಜೋಳ ನೀಡಿದ್ದು ಕ್ಷೇತ್ರದ ಜನರ ಪರವಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕ್ಷೇತ್ರದ ಜನ ಬಿಜೆಪಿಗೆ ಆಶೀರ್ವಾದ ಮಾಡದಿದ್ದರೂ ಅದನ್ನು ಲೆಕ್ಕಿಸದೇ ಬಿಜೆಪಿ ಸರ್ಕಾರ ಪಕ್ಷಾತೀತವಾಗಿ ಅನುದಾನ ಬಿಡುಗಡೆ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆ ಪಡುವಂಥದ್ದು. ಹಾಗೊಂದು ವೇಳೆ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಆಶೀರ್ವಾದ ಸಿಕ್ಕಿದ್ದೇ ಆದಲ್ಲಿ ಕ್ಷೇತ್ರ ಇನ್ನಷ್ಟು ಅನುದಾನದೊಂದಿಗೆ ಹೆಚ್ಚಿನ ಅಭಿವೃದ್ಧಿ ಕಾಣುತ್ತಿತ್ತು. ಅಧಿಕಾರದಲ್ಲಿಲ್ಲದಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಇದಕ್ಕೆ ಡಿಸಿಎಂ ಗೋವಿಂದ ಕಾರಜೋಳ ಸೇರಿದಂತೆ ರಾಜ್ಯ ಬಿಜೆಪಿ ನಾಯಕರ ಆಶೀರ್ವಾದವೇ ಕಾರಣ. ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ಕೊಡುವುದಾಗಿ ರಾಜ್ಯ ಸರ್ಕಾರ ಆಶ್ವಾಸನೆ ನೀಡಿದ್ದು ಸರ್ಕಾರಕ್ಕೆ ಋಣಿಯಾಗಿದ್ದೇನೆ ಎಂದು ವಿಜುಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.