More

    ಪ್ರತಿಯೊಬ್ಬರ ಬದುಕಿನ ದಿವ್ಯ ಶಕ್ತಿ ಮಹಿಳೆ: ಡಾ ನೀಲಮ್ಮ ತಾಯಿ ಅಸುಂಡಿ

    ಗದಗ: ಆದಿಶಕ್ತಿ ನಗರದ ಅಧ್ಯಾತ್ಮ ವಿದ್ಯಾಶ್ರಮದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶಿವಶರಣೆ ಡಾ ನೀಲಮ್ಮ ತಾಯಿ ಅಸುಂಡಿ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಿದ್ದಾಳೆ. ಅಬಲೆಯಲ್ಲ ಸಬಲೆ ಎನ್ನುವುದನ್ನು ಸಾಬೀತುಪಡಿಸಿದ್ದಾಳೆ. ಇಂದಿನ ಯುವ ಜನಾಂಗದ, ಒಂದು ಕುಟುಂಬದ, ಸಮಾಜದ ಬಹುದೊಡ್ಡ ಶಕ್ತಿಯಾಗಿ ಮಹಿಳೆಯ ಪಾತ್ರ ಹಿರಿದಾಗಿದೆ. ಮೌಲ್ಯಗಳು ಕುಸಿದು ಹೋಗುತ್ತಿರುವ ಇಂದಿನ ಸಂದರ್ಭದಲ್ಲಿ ‘ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರುವಾಗಿ’ ಪ್ರತಿಯೊಬ್ಬರ ಬದುಕಿನ ದಿವ್ಯ ಶಕ್ತಿಯಾಗಿ, ಮಕ್ಕಳಿಗೆ ಸಂಸ್ಕಾರವನ್ನು ನೀಡುವಲ್ಲಿ ತಾಯಿಯ ಜವಾಬ್ದಾರಿ ಮುಖ್ಯವಾಗುತ್ತದೆ. ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಮಹಿಳೆ ತನ್ನನ್ನು ತಾನು ಆತ್ಮವಿಮರ್ಶೆ ಮಾಡಿಕೊಂಡು ತನ್ನ ಪಾತ್ರವನ್ನು ಸರಿಯಾಗಿ ನಿಭಾಯಿಸುವ ದಿಟ್ಟತನ ತೋರಬೇಕು, ಮಹಿಳೆ ಮತ್ತು ಪುರುಷ ಎರಡು ಭಿನ್ನ ಅಲ್ಲ. ಜೀವನದ ಎರಡು ಬಂಡಿಗಳಂತೆ. ಒಂದಕ್ಕೊಂದು ಸರಿ ಹೊಂದಿಕೊಂಡು ಬದುಕನ್ನು ಸುಂದರವಾಗಿ ನಿಭಾಯಿಸುವ ಕೌಶಲ ಕಲಿತಾಗ  ಅದು ನಿಜವಾದ ಮಹಿಳಾ ಸಬಲೀಕರಣವಾಗುತ್ತದೆ ಎಂದು ಆಶೀರ್ವಚನ ನೀಡಿದರು.

    ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಎಫ್ ಎಂ ಡಬಾಲಿ ಪಿಯು ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಸುಧಾ ಹುಚ್ಚಣ್ಣವರ ಮಾತನಾಡುತ್ತಾ, ಮಹಿಳೆ ಇಂದು ಬಹು ಆಯಾಮಗಳಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದಾಳೆ ಜೊತೆಗೆ ಮನೆ ಬೆಳಗುವ ನಂದಾದೀಪವಾಗಿ, ಸಮಾಜದ ಅಂಕುಡೊಂಕುಗಳನ್ನು ತಿದ್ದಿ ತೀಡುವ ಮಹಾ ಶಿಕ್ಷಕಿಯಾಗಿ ಬದುಕಿಗೆ ಮಾರ್ಗ ತೋರುವ ಮಾರ್ಗದರ್ಶಿಯಾಗಿದ್ದಾಳೆ ಎನ್ನುವುದು ಎಷ್ಟು ಸತ್ಯವೋ, ಅಷ್ಟೇ ದೌರ್ಜನ್ಯಗಳು ಇಂದಿಗೂ ಮಹಿಳೆಯ ಮೇಲೆ ಆಗುತ್ತಿರುವುದು ಬೂದಿ ಮುಚ್ಚಿದ ಕೆಂಡದಂತೆ ಮುಂದುವರಿಯುತ್ತಲೇ ಸಾಗಿದೆ. ಇನ್ನೂ ಕೆಲವು ನಕಾರಾತ್ಮಕ ಮನಸ್ಥಿತಿಗಳು ಮಹಿಳೆಯನ್ನು ಎಲ್ಲೋ ಒಂದು ಕಡೆ ಕುಗ್ಗಿಸುವ ಕುತಂತ್ರವನ್ನು ಸಹ ನಡೆಸಿರುವುದು ಇಂದಿನ ಸಮಾಜಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದೆಲ್ಲವನ್ನ ಅರಿತು ಇಂದಿನ ಎಲ್ಲಾ ಮಹಿಳಾ ಸಮುದಾಯ ಮನೋ ದೈರ್ಯದಿಂದ ಪ್ರಜ್ಞಾವಂತಿಕೆಯ ದಿಟ್ಟತನದಿಂದ ಮುಂದುವರಿಯುವುದು ಎಲ್ಲ ಮಹಿಳೆಯರಿಗೆ ಇಂದು ಅತ್ಯವಶ್ಯಕವಾಗಿದೆ ಎಂದರು. ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ವಿ ವಿ ನಡುವಿನಮನಿಯವರು ಮಹಿಳಾ ದಿನದ ಈ ಸಂದರ್ಭದಲ್ಲಿ ಪ್ರತಿಯೊಬ್ಬ ಮಹಿಳೆಯನ್ನು ಗೌರವಿಸುವುದು, ಸುಸಂಸ್ಕೃತ ಸಮಾಜದ ಲಕ್ಷಣವಾಗಿದೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುವುದನ್ನು ಸದಾ ನಾವು ಗಮನಿಸಬೇಕು ಎಂದು ಮಾತನಾಡಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ವಿ  ಎಂ ಹಿರೇಮಠ ಅವರು ಅಧ್ಯಕ್ಷೆಯ ನುಡಿಗಳನಾಡುತ್ತಾ ಮಹಿಳೆ ಒಬ್ಬ ಮಗಳಾಗಿ ಸಹೋದರಿಯಾಗಿ ಹೆಂಡತಿಯಾಗಿ ತಾಯಿಯಾಗಿ ಶಿಕ್ಷಕಿಯಾಗಿ ಹೀಗೆ ಹಲವು ಪಾತ್ರಗಳನ್ನು ನಿಭಾಯಿಸುವ ಸ್ತ್ರೀ ಪ್ರತಿಯೊಬ್ಬರ ಬದುಕಿನಲ್ಲಿ ಸ್ಪೂರ್ತಿದಾಯಕಿ. ಮಹಿಳಾ ಸಮಾನತೆಯನ್ನು ಕಾಯ್ದುಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಮಾತನಾಡಿದರು. ಕಾರ್ಯಕ್ರಮದಲ್ಲಿ ಆಶ್ರಮದ ಸಾಧಕಿ ಶರಣೆ ಮೈತ್ರಾದೇವಿ ಅಮ್ಮನವರು ಮಾತನಾಡುತ್ತಾ ಇಂದು ಶಿಕ್ಷಣದಲ್ಲಿ ಮಕ್ಕಳಿಗೆ ನೀತಿ ಕಥೆಗಳನ್ನು ಬೋಧನೆ ಮಾಡುವ ಮೂಲಕ ಪಠ್ಯದ ಜೊತೆಗೆ ನೈತಿಕ ಮೌಲ್ಯಗಳನ್ನು ಸಹ ಬೆಳೆಸುವುದು ಅವಶ್ಯವಾಗಿದೆ ಎಂದು ಮಹಿಳಾಪರ ವಿಚಾರಗಳನ್ನು ಹಂಚಿಕೊಂಡರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಶಿಕ್ಷಕರ ಸಂಘದ ಗ್ರಾಮೀಣ ವಿಭಾಗದ ಅಧ್ಯಕ್ಷರಾದ ಶ್ರೀ ಎಸ್ ಆರ್ ಬಂಡಿ, ಕಾರ್ಯದರ್ಶಿಗಳಾದ ಶ್ರೀ ಕೆ.ಬಿ ಕೊಣ್ಣೂರ್  ಆಗಮಿಸಿದ್ದರು. ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕಿ ಶ್ರೀಮತಿ ಶಾರದಾ ಕಾತರಕಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನಾ ಕಾರ್ಯದರ್ಶಿಗಳಾದ ಶ್ರೀಮತಿ ಬಿಬಿ ಹರ್ತಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿಯರ ಬಳಗದಿಂದ ವಚನ ನೃತ್ಯ ಕಾರ್ಯಕ್ರಮ ನೆರವೇರಿತು. ಶ್ರೀಮತಿ ಶೋಭಾ ಪಾಟೀಲ್ ಸ್ವಾಗತಿಸಿದರು. ಶೈಲಜಾ ಗುಂಜಳ್ ವಂದಿಸಿದರು. ಸಾಧಕ ಶಿಕ್ಷಕಿಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಎನ್ ಎಚ್ ಪಾಟೀಲ್ ಎಸ್ ಎಸ್ ಲಕ್ಷಕೊಪ್ಪ ಪಿಬಿ ಮುಧೋಳ್ ಮಠ ಎಂಬಿ ಪರ್ವತ ಗೌಡ ವಸಂತ್ ಕಲಕಂಬಿ, ಜಿಎಸ್ ಗೌಡರ್ ಎಸ್ಜಿ ಗೌಡ ಶಿಲ್ಪಾ ಗುಡಗೇರಿ ಎನ್ ಆರ್ ಹೂಗಾರ್ ಹಾಗೂ ತಾಲೂಕಿನ ಎಲ್ಲ ಶಿಕ್ಷಕರು ಹಾಗೂ ಅಧ್ಯಾತ್ಮ ವಿದ್ಯಾಶ್ರಮದ ಆದಿಶಕ್ತಿ ಬಳಗದ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts