ಶಿರಸಿ: ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಕೋವಿಡ್- 19 ಸೋಂಕು ತಗುಲದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಆಯಾ ಠಾಣೆಯ ಹೊರಗಡೆ ಪೊಲೀಸ್ ಹೆಲ್ಪ್ ಡೆಸ್ಕ್ ಆರಂಭಿಸಲಾಗಿದೆ ಎಂದು ಎಸ್ಪಿ ಶಿವಪ್ರಕಾಶ ದೇವರಾಜ ಹೇಳಿದರು.
ನಗರದ ಡಿವೈಎಸ್ಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ, ಶಿವಮೊಗ್ಗ ಸೇರಿ ರಾಜ್ಯದ ವಿವಿಧೆಡೆ ಪೊಲೀಸರಿಗೆ ಕರೊನಾ ಸೋಂಕು ತಗುಲಿದೆ. ಹೀಗಾಗಿ ಜಿಲ್ಲಾ ವ್ಯಾಪ್ತಿಯಲ್ಲಿ ಪೊಲೀಸರಿಗೆ ಸೋಂಕು ಹರಡದಂತೆ ಕ್ರಮ ವಹಿಸಲಾಗುತ್ತಿದೆ.
ಪೊಲೀಸ್ ಠಾಣೆಗಳು ಚಿಕ್ಕದಾಗಿರುವ ಕಾರಣ ಶಾರೀರಿಕ ಅಂತರ ಕಾಪಾಡಿಕೊಳ್ಳುವುದು ಕಷ್ಟ. ಹಾಗಾಗಿ ಠಾಣೆಯ ಹೊರಗಡೆ ಶಾಮಿಯಾನ ಹಾಕಿ ಹೆಲ್ಪ್ ಡೆಸ್ಕ್ ಆರಂಭಿಸಲಾಗಿದೆ ಎಂದರು. ಪೊಲೀಸ್ ಠಾಣೆಗೆ ಭೇಟಿ ನೀಡುವ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಮತ್ತು ಹ್ಯಾಂಡ್ಗ್ಲೌಸ್ ಧರಿಸಿಕೊಂಡು ಬರಬೇಕು.
ಠಾಣೆಯ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ನಿಂದ ಕೈ ತೊಳೆದುಕೊಳ್ಳಬೇಕು. ಸಾರ್ವಜನಿಕರು ಠಾಣೆಯ ಒಳಗಡೆ ಗುಂಪು -ಗುಂಪಾಗಿ ಪ್ರವೇಶಿಸಬಾರದು ಎಂದ ಅವರು, ಕರೊನಾ ಸೇನಾನಿಗಳಿಗೆ ಹೆಚ್ಚಿನ ಸೌಲಭ್ಯ ನೀಡಲಾಗುತ್ತಿದೆ. ಅಗತ್ಯವಿದ್ದಲ್ಲಿ ಪಿಪಿಇ ಕಿಟ್ ಹಾಕಲು ಸೂಚಿಸಲಾಗಿದೆ. ಕುಟುಂಬದ ಜತೆಗೂ ಸಂಪರ್ಕ ಹೊಂದದಂತೆ ಹೇಳಲಾಗಿದೆ. ಪರೀಕ್ಷೆ ಕೂಡ ಮಾಡಿಸಲಾಗುತ್ತಿದೆ. ಸೋಂಕಿನಿಂದ ಕಾಪಾಡಿಕೊಳ್ಳಲು ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಪ್ರತೀ ಠಾಣೆಯಲ್ಲಿ ಶೇ.50ರಷ್ಟು ಸಿಬ್ಬಂದಿಯನ್ನು ಕರೊನಾ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. 10 ದಿನಗಳಿಗೊಮ್ಮೆ ಸಿಬ್ಬಂದಿಯನ್ನು ಬದಲಾವಣೆ ಮಾಡಲಾಗುತ್ತದೆ ಎಂದರು. ಡಿವೈಎಸ್ಪಿ ಜಿ.ಟಿ. ನಾಯಕ, ಸಿಪಿಐ ಪ್ರದೀಪ ಬಿ.ಯು. ಇದ್ದರು.