ದಾವಣಗೆರೆ: ಪುರಾಣ, ಪುಣ್ಯಕಥೆಗಳು ಜತೆಗೆ ಹಿರಿಯರು ಹಾಕಿಕೊಟ್ಟ ರೀತಿ-ನೀತಿಗಳೇ ನಮ್ಮ ಕಾನೂನುಗಳ ಮೂಲವಾಗಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಎಂ.ಕರೆಣ್ಣವರ್ ಹೇಳಿದರು.
ಶ್ರೀ ಮಹರ್ಷಿ ವಾಲ್ಮೀಕಿ ಪ್ರತಿಷ್ಠಾನ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಕಾನೂನು ಸೇವಾ ದಿನಾಚರಣೆ ಪ್ರಯುಕ್ತ ನಗರದ ರೋಟರಿ ಬಾಲ ಭವನದಲ್ಲಿ ಹಮ್ಮಿಕೊಂಡಿದ್ದ ಕಾನೂನು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಪಿಡುಗುಗಳ ನಿವಾರಣೆಗೆ ತಜ್ಞರ ಅಭಿಪ್ರಾಯ ಪಡೆದು ಕಾನೂನು ರೂಪಿಸಲಾಗುತ್ತದೆ. ಬಾಲ್ಯವಿವಾಹ, ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ಸೇರಿ ಹಲವಾರು ಪಿಡುಗುಗಳು ಇಂದಿಗೂ ನಮ್ಮ ಸಮಾಜದಲ್ಲಿ ಬೇರೂರಿದ್ದು, ಇವುಗಳನ್ನು ತೊಡೆದು ಹಾಕಬೇಕು ಎಂದು ತಿಳಿಸಿದರು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಚ್. ಅರುಣ್ಕುಮಾರ್ ಮಾತನಾಡಿ, ದೇಶದ ಯುವಜನತೆ ಕಾನೂನಿನ ಬಗ್ಗೆ ಸರಿಯಾದ ಮಾಹಿತಿ ಪಡೆಯದೆ ಕೆಲವೊಮ್ಮೆ ಸಂಕಷ್ಟಗಳಿಗೆ ಸಿಲುಕುತ್ತಾರೆ. ಇಂತಹ ಸಂದರ್ಭದಲ್ಲಿ ನಮಗೆ ಕಾನೂನು ಗೊತ್ತಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಸಂವಿಧಾನದ ಅರಿವು ಬೆಳೆಸಿಕೊಳ್ಳುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.
ನಮ್ಮ ಸಂವಿಧಾನವೇ ಎಲ್ಲ ಕಾನೂನುಗಳ ತಾಯಿ. ಸಂವಿಧಾನದ ತತ್ವಗಳನ್ನು ತಿಳಿದುಕೊಳ್ಳಬೇಕು ಹಾಗೂ ಸಹಬಾಳ್ವೆ ನಡೆಸಬೇಕು. ಶಿಕ್ಷಣದಿಂದ ಕಾನೂನು ಹಾಗೂ ಸಂವಿಧಾನದ ಬಗ್ಗೆ ತಿಳಿದುಕೊಳ್ಳಲು ಹಾಗೂ ದೇಶ ಉದ್ಧಾರವಾಗಲು ಸಾಧ್ಯ ಎಂದು ಹೇಳಿದರು
ಮಹರ್ಷಿ ವಾಲ್ಮೀಕಿ ಪ್ರತಿಷ್ಠಾನದ ಜಿಲ್ಲಾಧ್ಯಕ್ಷ ಹುಚ್ಚವನಹಳ್ಳಿ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಸ್.ಬಸವರಾಜ್, ಸಹಕಾರ್ಯದರ್ಶಿ ಎ.ಎಸ್.ಮಂಜುನಾಥ್, ಸಂಪನ್ಮೂಲ ವ್ಯಕ್ತಿ ಎನ್.ಎಂ.ಆಂಜನೇಯ, ಸೀತಮ್ಮ ಕಾಲೇಜಿನ ಪ್ರಾಚಾರ್ಯ ಬಿ.ಪಾಲಾಕ್ಷಿ, ಉಪನ್ಯಾಸಕ ಕುಸುಗಟ್ಟೆ, ಸಲಹಾ ಸಮಿತಿ ಸದಸ್ಯ ಕುಬೇರಪ್ಪ ಇತರರು ಇದ್ದರು.