ವಿಜಯಪುರ: ಮಹಾನಗರ ಪಾಲಿಕೆ ಚುನಾವಣೆ ರಾಜ್ಯದ ಗಮನ ಸೆಳೆದಿದ್ದು, ಅ.28 ರಂದು ನಡೆಯಲಿರುವ ಮತದಾನಕ್ಕೆ ಮತದಾರರು ಬಿಜೆಪಿ ಪರ ಹಕ್ಕು ಚಲಾಯಿಸಲು ಉತ್ಸುಕರಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಹೇಳಿದರು.
ಕಳೆದೊಂದು ವಾರದಿಂದ ಪ್ರಚಾರ ಭರಾಟೆ ಜೋರಾಗಿದೆ. ಇದೀಗ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಈವರೆಗೂ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ಪರವಾಗಿ ಎಲ್ಲ ಮುಖಂಡರು ಮತಯಾಚಿಸಿದ್ದು ಈ ಬಾರಿ ಜನರ ಒಲವು ಬಿಜೆಪಿಯತ್ತ ಹೆಚ್ಚಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಬಿಜೆಪಿ ಅಧಿಕಾರವಧಿಯಲ್ಲಿ ಅಭಿವೃದ್ಧಿ ಪರ್ವ ಆರಂಭಗೊಂಡಿದೆ. ವಿಮಾನ ನಿಲ್ದಾಣ ಕಾಮಗಾರಿ, ರಸ್ತೆ ಅಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ತೋಟಗಾರಿಕೆ ಹೀಗೆ ಮುಂತಾದ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿದ್ದು ಜನರು ಕೊಂಡಾಡುತ್ತಿದ್ದಾರೆ. ಮತಯಾಚನೆಗೆ ಹೋದಾಗ ಜನರೇ ಅಭಿವೃದ್ಧಿ ಬಗ್ಗೆ ಕೊಂಡಾಡಿ ಅಭಿನಂದಿಸುತ್ತಿದ್ದಾರೆ ಎಂದು ಕೂಚಬಾಳ ತಿಳಿಸಿದರು.
ಎಸ್ ಸಿ ಮತ್ತು ಎಸ್ ಟಿ ಮೀಸಲಾತಿ ಹೆಚ್ಚಿಸಿರುವುದು ಸರ್ಕಾರದ ವರ್ಚಸ್ಸು ಹೆಚ್ಚಿಸಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬೊಮ್ಮಾಯಿ ಅವರು ಸರ್ವಸಮಾಜಗಳಿಗೆ ನೀಡಿರುವ ಆದ್ಯತೆಯನ್ನು ಜನ ಗಮನಿಸಿದ್ದು, ಬಿಜೆಪಿ ಪರ ಅಲೆ ಹೆಚ್ಚಿಸಿದೆ ಎಂದರು.
ನಗರದಲ್ಲಿ ಪ್ರಜ್ಞಾವಂತ ಮತದಾರರು ರಾಜಕೀಯ ಬೆಳವಣಿಗೆಗಳ ಬಗ್ಗೆ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಏನೆಲ್ಲಾ ಮಾಡಿದೆ ಮತ್ತು ಇದೀಗ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಏನೆಲ್ಲಾ ಮಾಡುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸಹಜವಾಗಿಯೇ ಬಿಜೆಪಿಯ ಅಭಿವೃದ್ಧಿ ಕಾರ್ಯಗಳು ಜನರ ಮನಸ್ಸು ಗೆದ್ದಿವೆ ಎಂದು ಕೂಚಬಾಳ ತಿಳಿಸಿದರು.
ಬಿಜೆಪಿ ಧರ್ಮ, ಸಂಸ್ಕೃತಿ ಉಳಿಸುವ, ಅಭಿವೃದ್ಧಿ ಮಾಡುವ ಪಕ್ಷ ಎಂದು ಜನ ಅರಿತುಕೊಂಡಿದ್ದಾರೆ. ಹೀಗಾಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗರಿಷ್ಠಿ 33 ಹಾಗೂ ಕನಿಷ್ಠ 25 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಖಂಡರಾದ ಚಂದ್ರಶೇಖರ ಕವಟಗಿ, ಮಲ್ಲಿಕಾರ್ಜುನ ಜೋಗೂರ, ಬಸವರಾಜ ಬಿರಾದಾರ, ಸುರೇಶ ಬಿರಾದಾರ, ಉಮೇಶ ಕಾರಜೋಳ, ಪಾಪುಸಿಂಗ್ ರಜಪೂತ,
ಕೃಷ್ಣಾ ಗುನ್ಹಾಳಕರ, ಭರತ ಕೋಳಿ, ವಿಜಯ ಜೋಷಿ ಮತ್ತಿತರರಿದ್ದರು.