ನರೇಗಲ್ಲ: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಹಲವಾರು ಮನೆಗಳು ಬಿದ್ದಿವೆ. ಹೋಬಳಿಯಾದ್ಯಂತ ಸುಮಾರು 6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಉಳ್ಳಾಗಡ್ಡಿ, 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿರುವ ಮೆಣಸಿನಕಾಯಿ ಬೆಳೆ ಕೊಳೆಯುತ್ತಿದೆ. ಇದರಿಂದ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರು ಕಂಗೆಟ್ಟಿದ್ದಾರೆ.
ಪಪಂ ವ್ಯಾಪ್ತಿಯ ಅಬ್ಬಿಗೇರಿ, ಕೋಡಿಕೊಪ್ಪ, ಕೋಚಲಾಪೂರ, ತೋಟಗಂಟಿ, ಮಲ್ಲಾಪೂರ, ದ್ಯಾಂಪೂರ ಗ್ರಾಮಗಳಲ್ಲಿ 50ಕ್ಕೂ ಅಧಿಕ ಮನೆಗಳು ಬಿದ್ದಿವೆ. ಪರಿಹಾರಕ್ಕಾಗಿ ಗ್ರಾಮಸ್ಥರು ಗ್ರಾಮಲೆಕ್ಕಾಧಿಕಾರಿಗಳನ್ನು ವಿಚಾರಿಸಿದರೆ ಪಪಂ ಅಧಿಕಾರಿಗಳೇ ವರದಿ ಸಲ್ಲಿಸಬೇಕು ಎನ್ನುತ್ತಾರೆ. ಪಪಂ ಅಧಿಕಾರಿಗಳನ್ನು ವಿಚಾರಿಸಿದರೆ ಅರ್ಜಿ ಕೊಡಿ ನೋಡೋಣ ಎನ್ನುತ್ತಿದ್ದಾರೆ. ಇದರಿಂದಾಗಿ ಮನೆ ಹಾನಿಯಾದವರು ಪರದಾಡುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಕ್ಷಣವೇ ವಾರ್ಡ್ಗೆ ಒಬ್ಬರಂತೆ ಪಪಂ ಅಧಿಕಾರಿಗಳನ್ನು ನೇಮಿಸಿ ಬಿದ್ದ ಮನೆಗಳ ಸರ್ವೆ ಕಾರ್ಯ ಕೈಗೊಂಡು, ಸೂಕ್ತ ಪರಿಹಾರ ನೀಡಲು ತಾಲೂಕಾಡಳಿತ ಮುಂದಾಗಬೇಕು. ಜಮೀನುಗಳಲ್ಲಿನ ಹಾನಿಯನ್ನು ಗ್ರಾಮಲೆಕ್ಕಾಧಿಕಾರಿಗಳು ಪರಿಶೀಲನೆ ಕೈಗೊಳ್ಳಬೇಕು.
| ಬಸನಗೌಡ ಪೊಲೀಸ್ ಪಾಟೀಲ ದ್ಯಾಂಪೂರ ಗ್ರಾಮಸ್ಥ
ನರೇಗಲ್ಲ ಪಪಂ ವ್ಯಾಪ್ತಿಯಲ್ಲಿ ಮಳೆಯಿಂದ ಆದ ಹಾನಿಯ ಬಗ್ಗೆ ಮನೆಗಳ ಮಾಲೀಕರು ಪಪಂಗೆ ಅರ್ಜಿ ನೀಡಬೇಕು. ಪಪಂ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ಕೈಗೊಂಡು ತಹಸೀಲ್ದಾರರಿಗೆ ವರದಿ ಸಲ್ಲಿಸುವರು. ಶುಕ್ರವಾರದವರೆಗೆ 30ಕ್ಕೂ ಅಧಿಕ ಮನೆಗಳ ಪರಿಶೀಲನೆ ಕೈಗೊಳ್ಳಲಾಗಿದೆ.
| ಮಹೇಶ ನಿಡಶೇಶಿ ಪಪಂ ಮುಖ್ಯಾಧಿಕಾರಿ, ನರೇಗಲ್ಲ