ನರಗುಂದ: ಗ್ರಾಹಕರು ಮತ್ತು ಠೇವಣಿದಾರರು ಸಹಕಾರಿ ಬ್ಯಾಂಕ್ಗಳಿಗೆ ಎರಡು ಕಣ್ಣುಗಳಿದ್ದಂತೆ. ರಾಷ್ಟ್ರೀಕೃತ ಬ್ಯಾಂಕ್ಗಳು ಸಣ್ಣ ಮತ್ತು ಮಧ್ಯಮ ವರ್ಗದವರಿಗೆ ಸಾಲ ನೀಡಲು ಹಿಂದೇಟು ಹಾಕುತ್ತಿವೆ. ಆದರೆ, ಸಹಕಾರಿ ಬ್ಯಾಂಕ್ಗಳು ಸಕಾಲದಲ್ಲಿ ಸಾಲ ನೀಡಿ ಜನರ ಜೀವನಾಡಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಸ್ವಾಮಿ ವಿವೇಕಾನಂದ ಸೌಹಾರ್ದ ಪತ್ತಿನ ಅಧ್ಯಕ್ಷ ಎಂ.ಎನ್. ಪಾಟೀಲ ಹೇಳಿದರು.
ನರಗುಂದ ಕಸಬಾ ಬಡಾವಣೆಯ ಚಂದ್ರಗೌಡ ಪಾಟೀಲ ಅವರ ಕಟ್ಟಡದಲ್ಲಿ ಆರಂಭಿಸಲಾದ ಬೀಳಗಿಯ ಸ್ವಾಮಿ ವಿವೇಕಾನಂದ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕ್ನ 11ನೇ ಶಾಖೆ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 2010ರಲ್ಲಿ ಬೀಳಗಿಯಲ್ಲಿ ಸ್ವಾಮಿ ವಿವೇಕಾನಂದ ಸಹಕಾರಿ ಬ್ಯಾಂಕ್ ಪ್ರಾರಂಭಿಸಲಾಗಿದೆ. ಸದ್ಯ 11ನೇ ಶಾಖೆ ಹೊಂದುವ ಮೂಲಕ 68.90 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. 60 ಕೋಟಿ ರೂ. ಠೇವಣಿ, 2 ಕೋಟಿ ರೂ. ಷೇರು, 52 ಕೋಟಿ ರೂ. ಸಾಲ ವಿತರಿಸಿ 39 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಗ್ರಾಹಕರ ಸಹಕಾರದಿಂದ ಬ್ಯಾಂಕ್ ಅಭಿವೃದ್ಧಿಯತ್ತ ದಾಪುಗಾಲಿಟ್ಟಿದೆ ಎಂದರು.
ಗುಡ್ಡದ ಹಿರೇಮಠದ ಸಿದ್ಧಲಿಂಗ ಸ್ವಾಮಿಗಳು ನೂತನ ಶಾಖೆ ಉದ್ಘಾಟಿಸಿ, ‘ಸಾಮಾಜಿಕ ಸಹಕಾರಿ, ಶಿಕ್ಷಣ, ಕೃಷಿ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿರುವ ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಯ ಅಧ್ಯಕ್ಷ ಎಂ.ಎನ್. ಪಾಟೀಲರು ಬೀಳಗಿಯಲ್ಲಿ ಸ್ವಾಮಿ ವಿವೇಕಾನಂದ ಕಾಲೇಜು ತೆರೆಯುವ ಮೂಲಕ ಬಡ ಮಕ್ಕಳಿಗೆ ಬೆಳಕಾಗಿದ್ದಾರೆ ಎಂದು ತಿಳಿಸಿದರು.
ಭೈರನಹಟ್ಟಿ ಶಾಂತಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಮನುಕುಲದ ಒಳಿತಿಗಾಗಿ ಸಮಾಜದ ಪ್ರತಿಯೊಬ್ಬರೂ ನಿಸ್ವಾರ್ಥ ಸೇವೆ ಸಲ್ಲಿಸಬೇಕು ಎಂದು ತಿಳಿಸಿದರು.
ಸಲಹಾ ಸಮಿತಿ ಸದಸ್ಯರಾದ ವಿ.ಎಸ್. ವೀರನಗೌಡ್ರ, ವಿ.ಎಫ್. ಮೇಟಿ, ರಾಜೇಶ್ವರಿ ವೀರನಗೌಡ್ರ, ಸವಿತಾ ರಾಯನಗೌಡ್ರ, ಬಿ.ವಿ. ಹಂಚಿನಾಳ, ಯು.ಎಫ್. ಪಾಟೀಲ, ಸಿ.ಎನ್. ಕಗದಾಳ, ಸಿ.ಎಸ್. ಪಾಟೀಲ, ಎಂ.ಎಸ್. ವಾಳದ, ಶಿವಲೀಲಾ ಕೊಳ್ಳಿಯವರ, ಸೀಮಾ ದೊಡ್ಡಲಿಂಗಪ್ಪನವರ, ಬಿ.ಎಚ್. ಹಳೇಮನಿ, ಪಿ.ಎಸ್. ಪಾಟೀಲ, ಬ್ಯಾಂಕ್ ವ್ಯವಸ್ಥಾಪಕ ವೈ.ಎ. ತಹಶೀಲ್ದಾರ, ಬಸವರಾಜ ಪಾಟೀಲ, ಸಾಗರ ಪಾಟೀಲ, ಕವಿತಾ ಹಳೇಮನಿ, ಜಿ.ಎನ್. ದೊಡ್ಡಲಿಂಗಪ್ಪನವರ, ವಾಸುರಡ್ಡಿ ವೆಂಕರಡ್ಡಿಯವರ ಇತರರು ಉಪಸ್ಥಿತರಿದ್ದರು.