More

    ದಾವಿವಿಯಿಂದ 20 ಕುಗ್ರಾಮಗಳ ದತ್ತು  -ಶೈಕ್ಷಣಿಕ ವರ್ಷದಿಂದಲೇ ಜಾರಿ -ಕುಲಪತಿ ಪ್ರೊ. ಬಿ.ಡಿ.ಕುಂಬಾರ ಹೇಳಿಕೆ 

    ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯವು ಗಾಂಧಿ ಪ್ರೇರಣೆ ವಿಶೇಷ ಕಾರ್ಯಕ್ರಮದ ಮೂಲಕ, ಕಾರ್ಯ ವ್ಯಾಪ್ತಿಯ ಕುಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲಿದೆ ಎಂದು ದಾವಿವಿ ಕುಲಪತಿ ಪ್ರೊ. ಬಿ.ಡಿ.ಕುಂಬಾರ ತಿಳಿಸಿದರು.
    ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ಮತ್ತು ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
    ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ 15ರಿಂದ 20 ಗ್ರಾಮಗಳನ್ನು ದತ್ತು ಪಡೆದು ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಯಾಗಲಿದೆ ಎಂದರು.
    ವಿವಿಯ ಪ್ರತಿಯೊಬ್ಬ ಪ್ರಾಧ್ಯಾಪಕರೂ ತಿಂಗಳಿಗೊಮ್ಮೆಯಾದರೂ ಗ್ರಾಮಕ್ಕೆ ಭೇಟಿ ನೀಡಿ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕೈಜೋಡಿಸುವರು. ಆ ಮೂಲಕ ಗ್ರಾಮಗಳಲ್ಲಿ ಶಿಕ್ಷಣ, ಆರೋಗ್ಯ, ಮೂಲ ಸೌಲಭ್ಯಗಳನ್ನು ದೊರಕಿಸಿಕೊಡುವ ಕೆಲಸವನ್ನು ಗಾಂಧಿ ಪ್ರೇರಣೆ ಕಾರ್ಯಕ್ರಮದ ಹೆಸರಿನಡಿ ಆಚರಿಸಲಾಗುವುದು ಎಂದು ತಿಳಿಸಿದರು.
    ಗಾಂಧೀಜಿ ಕಲ್ಪನೆಯ ಗ್ರಾಮಸ್ವರಾಜ್ಯವು ಎಲ್ಲರ ಸಹಭಾಗಿತ್ವ, ಸಹಕಾರದ ದುಡಿಮೆಯಿಂದ ನಿರ್ಮಾಣಗೊಳ್ಳಲಿದೆ. ಪ್ರತಿಯೊಬ್ಬ ವ್ಯಕ್ತಿಯೂ ಜವಾಬ್ದಾರಿ ಅರಿತು ಸತ್ಯನಿಷ್ಠೆ, ಪ್ರಾಮಾಣಿಕತೆ, ನಿಸ್ವಾರ್ಥದಿಂದ ಕೆಲಸ ಮಾಡಿದಾಗ ಸ್ವಾವಲಂಬಿ ಭಾರತವನ್ನು ಕಾಣಬಹುದು. ಬಾಪೂಜಿ ಅವರ ತತ್ವಾದರ್ಶಗಳ ಪಾಲನೆಗಾಗಿ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು. ಗಾಂಧೀಜಿ-ಶಾಸ್ತ್ರೀಜಿ ಇಬ್ಬರ ಸರಳ ಜೀವನ, ಭವ್ಯ ಭಾರತದ ಕಲ್ಪನೆ, ಕ್ರಿಯಾಶಕ್ತಿಗಳು ಯುವಜನರಿಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.
    ವಿಶೇಷ ಉಪನ್ಯಾಸ ನೀಡಿದ ಕಲಾ ನಿಕಾಯದ ಡೀನ್ ಪ್ರೊ.ವೆಂಕಟರಾವ್ ಪಲಾಟೆ, ಗಾಂಧೀಜಿ ಮತ್ತು ಲಾಲ್ ಬಹಾದೂರ್ ಶಾಸ್ತ್ರಿ ಇಬ್ಬರ ಜೀವನಶೈಲಿ, ಕಾರ್ಯವೈಖರಿಯಲ್ಲಿ ಸಾಮ್ಯತೆ ಇದೆ. ಅವರ ದೇಶಾಭಿಮಾನ, ಗ್ರಾಮೀಣಾಭಿವೃದ್ಧಿಯ ಯೋಜನೆಗಳು, ಸಾಮಾಜಿಕ ಚಿಂತನೆ, ಆರ್ಥಿಕ ಪರಿಕಲ್ಪನೆಗಳು ಸ್ವಾತಂತ್ರೃ ಭಾರತದ ಭದ್ರತೆಗೆ ಬುನಾದಿ ಹಾಕಿವೆ ಎಂದು ಹೇಳಿದರು.
    ಗಾಂಧೀಜಿ ಆಶಯದಂತೆ ಭಾರತದಲ್ಲಿ ಬೃಹತ್ ಕೈಗಾರಿಕೆಗಳಿಗಿಂತ ಗುಡಿ ಕೈಗಾರಿಕೆಗಳು ಹೆಚ್ಚಬೇಕು. ಇದು ದೇಶದ ನಿರುದ್ಯೋಗ, ಬಡತನ, ಅನಕ್ಷರತೆ ಸೇರಿ ಎಲ್ಲ ಸಮಸ್ಯೆಗಳಿಗೆ ಪರಿಹಾರಮಾರ್ಗವಾಗಿದೆ ಎಂದು ಹೇಳಿದರು.
    ಕುಲಸಚಿವೆ ಬಿ.ಬಿ.ಸರೋಜಾ, ಪರೀಕ್ಷಾಂಗ ಕುಲಸಚಿವ ಡಾ.ಕೆ.ಶಿವಶಂಕರ, ಹಣಕಾಸು ಅಧಿಕಾರಿ ಪ್ರೊ.ಆರ್.ಶಶಿಧರ ಮಾತನಾಡಿದರು. ಹಿಂದುಳಿದ ವರ್ಗಗಳ ಘಟಕದ ಸಂಚಾಲಕ ಡಾ.ನಾಗಭೂಷಣಗೌಡ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts