ಹುಬ್ಬಳ್ಳಿ: ಸರ್ಕಾರದ ಮಟ್ಟದಲ್ಲಿ ತೃತೀಯ ಲಿಂಗಿಗಳಿಗೆ ಸ್ಥಾನಮಾನ, ಗೌರವ ಸಿಗುತ್ತಿದೆ. ಖಾಸಗಿ ಕಂಪನಿ-ಸಂಸ್ಥೆಗಳು ತೃತೀಯ ಲಿಂಗಿಗಳಿಗೆ ಉದ್ಯೋಗವಕಾಶ ಕಲ್ಪಿಸಿಕೊಡಬೇಕು ಎಂದು ಪದ್ಮಶ್ರೀ ಡಾ. ಮಂಜಮ್ಮ ಜೋಗತಿ ಹೇಳಿದರು.
ಹುಬ್ಬಳ್ಳಿಯ ಎಸ್ಜೆಎಂವಿ ಸಂಘದ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನ ಸಮಾಜಶಾಸ್ತ್ರ ವಿಭಾಗ ಶನಿವಾರ ಆಯೋಜಿಸಿದ್ದ ‘ಸಮಾಜದಲ್ಲಿ ತೃತೀಯ ಲಿಂಗಿಗಳ ಸ್ಥಾನಮಾನ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತೃತೀಯ ಲಿಂಗಿಗಳು ಹೆಚ್ಚಿನ ಶಿಕ್ಷಣ ಪಡೆದಿರುವುದಿಲ್ಲ. ಆದರೆ, ಸ್ವಚ್ಛತೆ, ಜವಾನ, ಕಚೇರಿ ಸಹಾಯಕ ಕೆಲಸವನ್ನು ಸಮರ್ಥವಾಗಿ ನಿಭಾಯಿಸಬಲ್ಲರು ಎಂದರು.
ತಂದೆ-ತಾಯಿ, ಸಮಾಜ ನಮ್ಮನ್ನು ಒಪ್ಪಿಕೊಂಡಿದ್ದರೆ ನಾವು ಭಿಕ್ಷಾಟನೆಗಾಗಿ ಬೀದಿಗೆ ಬರುವ ಪರಿಸ್ಥಿತಿ ಬರುತ್ತಿರಲಿಲ್ಲ. ತೃತೀಯ ಲಿಂಗಿಗಳು ಎಲ್ಲೇ ಕಂಡರೂ ಗೌರವ ಕೊಡಿ. ತೃತೀಯ ಲಿಂಗಿಗಳಿಗೆ ಅನುಕಂಪ ಬೇಡ, ಅವಕಾಶ ಕಲ್ಪಿಸಿಕೊಡಬೇಕು ಎಂದು ಹೇಳಿದರು.
ನಮ್ಮ ದೈಹಿಕ-ಮಾನಸಿಕ ಬೆಳವಣಿಗೆಯನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಬದುಕುವ ಹಕ್ಕು ಎಲ್ಲರಿಗೂ ಇದೆ. ಸಮಾಜ ನಮ್ಮನ್ನು ಸಮಾನವಾಗಿ ನೋಡಬೇಕು. ತೃತೀಯ ಲಿಂಗಿಗಳು ಕನಿಷ್ಠ ಎಸ್ಎಸ್ಎಲ್ಸಿ ವ್ಯಾಸಂಗ ಮಾಡಿರಬೇಕು. ಜೀವನವನ್ನು ರೂಪಿಸಿಕೊಳ್ಳಲು ವಿದ್ಯೆ ಬಹಳ ಮುಖ. ದೇವರು, ದೇವಸ್ಥಾನದಲ್ಲಿ ಇಲ್ಲ. ನಾವು ಮಾಡುವ ಕೆಲಸದಲ್ಲಿ ಪರಮಾತ್ಮ ಇದ್ದಾನೆ ಎಂದರು.
ಸಂಘದ ಹಿರಿಯ ಸದಸ್ಯ ವೈ.ಬಿ. ಯಕಲಾಸಪುರ, ಪ್ರಾಚಾರ್ಯು ಡಾ. ಸಿಸಿಲಿಯಾ ಡಿಕ್ರೂಜ್, ಐಕ್ಯೂಎಸಿ ಕೋ-ಆರ್ಡಿನೇಟರ್ ಪೊ›. ಶಿವಕುಮಾರ ಬನ್ನಿಹಟ್ಟಿ, ಉಪನ್ಯಾಸಕಿ ವಿದ್ಯಾ ಡಂಬಳ ಇದ್ದರು. ಉಪನ್ಯಾಸಕಿ ಉಷಾ ಕೆಂಚರಲಿ ಸ್ವಾಗತಿಸಿದರು. ಉಪನ್ಯಾಸಕ ಅಣ್ಣಪ್ಪ ಕೊರವರ ಪರಿಚಯಿಸಿದರು. ವಿದ್ಯಾರ್ಥಿನಿ ಶ್ವೇತಾ ನಿರ್ವಹಿಸಿದರು.