ಬೆಳಗಾವಿ: ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಜಾಗತಿಕವಾಗಿ ವಿಶೇಷ ಕೊಡುಗೆ ನೀಡಿರುವ ಕೆಎಲ್ಇ ಸಂಸ್ಥೆ ಸಮಾಜಮುಖಿಯಾಗಿ ಬೆಳೆದುನಿಂತಿದ್ದು, ದೇಶದ ಹೆಮ್ಮೆ ಹೆಚ್ಚಿಸಿದೆ ಎಂದು ಬೇಲಾಪುರ ನವಿಮುಂಬಯಿ ಶಾಸಕಿ ಮಂದಾ ಮ್ಹಾತ್ರೆ ಹೇಳಿದ್ದಾರೆ.
ನವಿಮುಂಬಯಿ ನೆರೂಲ್ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೆಎಲ್ಇ ಸಂಸ್ಥೆಯ ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕೆಎಲ್ಇ 100 ವರ್ಷಗಳಿಂದ ಗುಣಮಟ್ಟದ ಶೈಕ್ಷಣಿಕ ಸೇವೆ ನೀಡುತ್ತಿದೆ ಎಂದರು.
ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಕಲ್ಪನಾತೀತವಾಗಿ ಕೆಎಲ್ಇ ಸಾಧನೆ ಮಾಡಿದೆ. ಅಂತೆಯೇ ನವಿಮುಂಬಯಿ ಭಾಗದಲ್ಲಿಯೂ ವಿದ್ಯಾಸಂಸ್ಥೆ ಪ್ರಾರಂಭಿಸುವ ಮೂಲಕ ಶೈಕ್ಷಣಿಕವಾಗಿ ಭದ್ರ ನೆಲೆಗಟ್ಟು ರೂಪಿಸುತ್ತಿದೆ. ಕೆಎಲ್ಇ ಶಾಲೆಗಳು ವಿಶ್ವದರ್ಜೆಯ ಮೂಲಸೌಕರ್ಯ, ದಕ್ಷ ಬೋಧನೆಗೆ ಹೆಸರಾಗಿವೆ. ನವಿ ಮುಂಬಯಿ ಭಾಗದಲ್ಲಿ ಕೆಎಲ್ಇ ಸಂಸ್ಥೆಯನ್ನು ವಿಸ್ತರಿಸಬೇಕೆಂಬ ಸಂಕಲ್ಪ ಸಂಸ್ಥೆಯದಾಗಿತ್ತು. ಈಗಾಗಲೇ ಮಹಾರಾಷ್ಟ್ರದಲ್ಲಿ ಕೆಎಲ್ಇ ಹಲವು ಶಿಕ್ಷಣ ಸಂಸ್ಥೆ ಮುನ್ನಡೆಸುತ್ತಿದೆ. ಸದ್ಯ ನವಿ ಮುಂಬಯಿಯಲ್ಲಿ ಶಾಲೆಯ ಕಟ್ಟಡಕ್ಕೆ ಶಿಲಾನ್ಯಾಸ ಹಾಕಿರುವುದು ವೈಯಕ್ತಿಕವಾಗಿ ಸಂತೋಷ ತಂದಿದೆ ಎಂದರು. ಇದೇ ವೇಳೆ ಮಂದಾ ಮ್ಹಾತ್ರೆ ಅವರನ್ನು ಡಾ.ಪ್ರಭಾಕರ ಕೋರೆ ಅವರು ಸನ್ಮಾನಿಸಿದರು. ಬಳಿಕ ಶರಣ ಸಂಕುಲ ಚಾರಿಟೇಬಲ್ ಸೊಸೈಟಿಯು ಡಾ.ಪ್ರಭಾಕರ ಕೋರೆ ಅವರನ್ನು ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರನ್ನು ಸನ್ಮಾನಿಸಿತು. ನವಿಮುಂಬಯಿಯ ಮಾಜಿ ಮಹಾಪೌರ ಶಶಿಕಾಂತ ಬಿರಾಜದಾರ್, ಆಶಾತಾಯಿ ಕೋರೆ, ನವಿ ಮುಂಬಯಿಯ ಗಣ್ಯರು ಹಾಗೂ ಕಲಂಬೋಳಿ ಕೆಎಲ್ಇ ಅಂಗಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ಇದ್ದರು.