ಸಿದ್ದಾಪುರ: ತಾಲೂಕಿನಾದ್ಯಂತ ಶನಿವಾರ ರಾತ್ರಿ ಬೀಸಿದ ಗಾಳಿಗೆ ಹಾಗೂ ಸುರಿದ ಮಳೆಗೆ 15ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದನ್ನು ಭಾನುವಾರ ಹೆಸ್ಕಾಂ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗುತ್ತಿಗೆದಾರರು ವಿದ್ಯುತ್ ಸಂಪರ್ಕ ನೀಡುವಲ್ಲಿ ಮುಂದಾಗಿದ್ದಾರೆ.
ತಾಲೂಕಿನ ಬಿಳಗಿ, ಅಕ್ಕುಂಜಿ, ಹಾರ್ಸಿಕಟ್ಟಾ, ಹೇರೂರು ಫೀಡರ್ಗಳಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದಿದ್ದಲ್ಲದೆ ವಿದ್ಯುತ್ ತಂತಿಯ ಮೇಲೆ ಐವತ್ತಕ್ಕೂ ಹೆಚ್ಚು ಕಡೆಗಳಲ್ಲಿ ಮರದ ರೆಂಬೆಗಳು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮರದ ರೆಂಬೆಗಳನ್ನು ತೆರವುಗೊಳಿಸಿ ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ ಎಂದು ಹೆಸ್ಕಾಂ ಅಧಿಕಾರಿ ಡಿ.ಟಿ. ಹೆಗಡೆ ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯ, ಮೊಬೈಲ್, ಸ್ಥಿರ ದೂರವಾಣಿ ಸ್ಥಗಿತ: ತಾಲೂಕಿನಲ್ಲಿ ಶನಿವಾರ ರಾತ್ರಿ ಗುಡುಗು ಸಹಿತ ಮಳೆ ಬಿದ್ದಿದ್ದರಿಂದ ರಾತ್ರಿಯಿಂದಲೇ ಬಿಎಸ್ಎನ್ಎಲ್ ಮೊಬೈಲ್ ಟವರ್ ಹಾಗೂ ಸ್ಥಿರ ದೂರವಾಣಿ ಸ್ಥಗಿತಗೊಂಡಿದೆ. ಭಾನುವಾರ ಸಂಜೆ ಕೆಲವೆಡೆ ಕಾರ್ಯನಿರ್ವಹಿಸುತ್ತಿದ್ದು ಅದು ಸಮರ್ಪಕವಾಗಿ ಇಲ್ಲ ಎಂದು ಜನತೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮರಗಳ ತೆರವು ಕಾರ್ಯಾಚರಣೆ: ಕುಮಟಾದ ಗಿಬ್ ವೃತ್ತದ ಬಳಿ ಶನಿವಾರ ರಾತ್ರಿ ಗಾಳಿ-ಮಳೆಗೆ ಹೆದ್ದಾರಿಯಂಚಿನ ದೊಡ್ಡ ಮರವೊಂದು ವಿದ್ಯುತ್ ತಂತಿಗಳ ಮೇಲೆ ಮುರಿದು ಬಿದ್ದು ವಿದ್ಯುತ್ ವ್ಯತ್ಯಯಕ್ಕೆ ಕಾರಣವಾಯಿತು. ಭಾನುವಾರ ಬೆಳಗ್ಗೆ ಹೆಸ್ಕಾಂ ಅಧಿಕಾರಿಗಳು ಮರ ತೆರವು ಕಾರ್ಯಾಚರಣೆ ನಡೆಸಿದರು. ಶಾಸಕ ದಿನಕರ ಶೆಟ್ಟಿ ಅವರ ಸೂಚನೆಯಂತೆ ಪುರಸಭೆಯ ಜೆಸಿಬಿ ಬಳಸಿ ಪವರ್ವೆುನ್ಗಳಾದ ಗುರುನಾಥ ನಾಯ್ಕ, ಅರುಣ ಎಸ್. ಗುನಗಾ ಹಾಗೂ ಇತರ ಸಿಬ್ಬಂದಿ ಸನಿಹದಲ್ಲಿದ್ದ ಟ್ರಾನ್ಸಫಾರ್ಮರ್ಗೆ ಯಾವುದೇ ಧಕ್ಕೆಯಾಗದಂತೆ ಮರ ತೆರವುಗೊಳಿಸಿ ಪುನಃ ವಿದ್ಯುತ್ ಸಂಪರ್ಕ ನೀಡಿದರು.