More

    ಕೃಷಿ ಪಂಪ್‌ಸೆಟ್‌ಗಳ ನಿರಂತರ ಕಳ್ಳತನ

    ಪಾಂಡವಪುರ: ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಅಳವಡಿಸಿರುವ ಕೇಬಲ್ ಹಾಗೋ ಮೋಟರ್‌ಗಳು ನಿರಂತರವಾಗಿ ಕಳ್ಳತನವಾಗುತ್ತಿದ್ದರೂ ಮೇಲುಕೋಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ಸಂಗಾಪುರ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು.

    ಗ್ರಾಮದ ಡೇರಿ ಕಟ್ಟಡದ ಮುಂದೆ ಜಮಾವಣೆಗೊಂಡ ಗ್ರಾಮಸ್ಥರು, ಮೇಲುಕೋಟೆ ಠಾಣೆ ಪೊಲೀಸರ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು. ಕಳೆದ ಹದಿನೈದು ದಿನಗಳ ಹಿಂದೆ ಗ್ರಾಮದ 10ಕ್ಕೂ ಹೆಚ್ಚು ರೈತರ ಜಮೀನಿನ ಪಂಪ್‌ಸೆಟ್‌ಗಳಲ್ಲಿ ಕಳ್ಳತನವಾಗಿದೆ. ಇದೀಗ ಮತ್ತೆ ಹಲವೆಡೆ ಕಳ್ಳತನವಾಗಿದೆ. ಆದರೆ ಪೊಲೀಸರು ರೈತರಿಂದ ದೂರು ಪಡೆದು ಕಳ್ಳರನ್ನು ಹಿಡಿಯಲು ಮುಂದಾಗುತ್ತಿಲ್ಲ. ಹೀಗಾಗಿ ಪೊಲೀಸರ ವರ್ತನೆ ಬಗ್ಗೆ ಅನುಮಾನ ಕಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

    ಒಂದು ಬಾರಿ ಕೃಷಿ ಪಂಪ್‌ಸೆಟ್ ಅಳವಡಿಸಬೇಕಾದರೆ ಹೆಚ್ಚು ಹಣ ಬೇಕು. ಇದೇ ರೀತಿ ಪದೇ ಪದೆ ಕಳ್ಳತನವಾಗುತ್ತಿದ್ದರೆ ಜಮೀನು ಮಾರಾಟ ಮಾಡಿ ಪಂಪ್‌ಸೆಟ್‌ಗಳನ್ನು ಖರೀದಿ ಮಾಡಬೇಕಾಗುತ್ತದೆ. ಕೆಲ ರೈತರು ಸಾಲ ಮಾಡಿ ಅಳವಡಿಸಿದ್ದ ಪಂಪ್‌ಸೆಟ್‌ಗಳು ಕಳ್ಳತನವಾಗಿದೆ. ಪೊಲೀಸ್ ಇಲಾಖೆ ಈ ವಿಚಾರದಲ್ಲಿ ನಿರ್ಲಕ್ಷೃ ವಹಿಸಿದೆ. ಮೇಲುಕೋಟೆ ಹೋಬಳಿಯ ಸುತ್ತಮುತ್ತಲಿನ ದೇವಸ್ಥಾನಗಳು, ಜಮೀನುಗಳಲ್ಲಿ ಪಂಪ್‌ಸೆಟ್, ಕೃಷಿ ಯಂತ್ರೋಪಕರಣಗಳು ಸೇರಿದಂತೆ ಕಳ್ಳತನ ಪ್ರಕರಣಗಳು ನಡೆಯುತ್ತಿದೆ. ಕಳ್ಳರ ಒಂದು ದೊಡ್ಡ ಗುಂಪು ವ್ಯವಸ್ಥಿತವಾಗಿ ಕಳ್ಳತನ ಮಾಡುತ್ತಿದೆ ಎಂದು ದೂರಿದರು.

    ಗುರುವಾರ ಒಂದೇ ರಾತ್ರಿಯಲ್ಲಿ ಗ್ರಾಮದ ಸಿದ್ದೇಶ್ವರ ಅವರ ಜಮೀನಿನಲ್ಲಿ 25 ಸಾವಿರ ರೂ. ಮೌಲ್ಯದ ಯಂತ್ರೋಪಕರಣ ಮತ್ತು ಕೇಬಲ್ ಕಳ್ಳತನವಾಗಿದೆ. ಅದೇ ರೀತಿ ನಾರಾಯಣಚಾರಿ, ಶಿವಣ್ಣ, ಜವರಶೆಟ್ಟಿ, ಅಭಿಷೇಕ್, ಕೃಷ್ಣೇಗೌಡ, ಕೆಂಪೇಗೌಡ, ಪ್ರಭು, ಪರಮೇಶ್, ಕಾಂತ, ರೋಹಿತ್, ಮಹದೇವಶೆಟ್ಟಿ, ಜವರೇಗೌಡ ಹಾಗೂ ಬಳೇಅತ್ತಿಗುಪ್ಪೆ ಗ್ರಾಮದ ಕೃಷ್ಣಯ್ಯ ಅವರ ಜಮೀನಿನಲ್ಲಿ ಕಳ್ಳತನವಾಗಿದೆ. ಕಳ್ಳರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts