ಮೈಸೂರು: ಕೃತಕ ಬುದ್ಧಿಮತ್ತೆ ಹೇಳುವುದನ್ನೇ ಕೇಳುತ್ತಾ ಹೋದರೆ ದೊಡ್ಡ ಆಪತ್ತು ಎದುರಾಗುವುದು ನಿಶ್ಚಿತ ಎಂದು ಇಸ್ರೋ ನಿವೃತ್ತ ಅಧ್ಯಕ್ಷ, ಸಮ್ಮೇಳನಾಧ್ಯಕ್ಷ ಎ.ಎಸ್.ಕಿರಣ್ಕುಮಾರ್ ಎಚ್ಚರಿಸಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಆಯೋಜಿಸಿದ್ದ 14ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಶನಿವಾರ ಮಾತನಾಡಿದರು.
ಕೃತಕ ಬುದ್ಧಿಮತೆ ಉತ್ತಮ ಕಾರ್ಯಕ್ಕೆ ಮಾತ್ರ ಬಳಸಬೇಕು. ಇದನ್ನು ಮಿತಿಮೀರಿ ಬಳಕೆ ಸರಿಯಲ್ಲ. ಹಳಿ ತಪ್ಪಿದರೆ ಅನುಹುತವಾಗಲಿದೆ. ಆದ್ದರಿಂದ ಎಚ್ಚರಿಕೆ ವಹಿಸಬೇಕು. ಈ ಕುರಿತು ಅರಿವು ಮೂಡಿಸುವ ಕೆಲಸ ಹೆಚ್ಚಾಗಬೇಕು ಎಂದರು.
ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ತ್ವರಿತಗತಿಯಲ್ಲಿ ಬದಲಾವಣೆಗಳು ಆಗುತ್ತಿವೆ. ಇದರ ಲಾಭವನ್ನು ಸುಸ್ಥಿರ ಅಭಿವೃದ್ಧಿಗೆ ವಿನಿಯೋಗಿಸಿಕೊಳ್ಳಬೇಕು ಎಂದರು.
ಭಾರತ್ ಸ್ಕೌಟ್ ಆ್ಯಂಡ್ ಗೈಡ್ಸ್ ಸಂಸ್ಥೆಯ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ಈಗಿನ ತಲೆಮಾರಿನವರು ಗೂಗಲ್ ಗುಲಾಮರಾಗಿದ್ದಾರೆ. ವಿಜ್ಞಾನವು ಹಿಂದೆಂದಿಗಿಂತಲೂ ಪ್ರಸ್ತುತವಾಗಿದೆ. ವೈಜ್ಞಾನಿಕ ವಿಚಾರವನ್ನು ವಿದ್ಯಾರ್ಥಿಗಳಿಗೆ ಶಿಕ್ಷಕರು ಹೇಳಿಕೊಡಬೇಕು ಎಂದರು.
ಎಂಎಲ್ಸಿ ಎಚ್.ವಿಶ್ವನಾಥ್ ಮಾತನಾಡಿ, ಮೂಲ ವಿಜ್ಞಾನದ ಮೇಲೆ ಸಾಮಾಜಿಕ ಜಾಲತಾಣವು ದಾಳಿ ಮಾಡುತ್ತಿದೆ. ಆದ್ದರಿಂದ ಮೂಲ ವಿಜ್ಞಾನ ಇನ್ನಷ್ಟು ಸದೃಢಗೊಳಿಸಬೇಕು ಎಂದರು.
ದೇಶದ ಅಭಿವೃದ್ಧಿಗೆ ವಿಜ್ಞಾನ ಅಗತ್ಯವಾಗಿದೆ. ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ವಿಜ್ಞಾನಕ್ಕೆ ಒತ್ತು ನೀಡಿದ್ದರು. ಆಗ ಟೀಕೆ ವ್ಯಕ್ತವಾಗಿತ್ತು. ಕಾಲ ಕಳೆದಂತೆ ಅವರು ನೀಡಿದ ಉತ್ತೇಜನದ ಮಹತ್ವದ ಅರಿವು ಮೂಡಿತು. ಸ್ವಾತಂತ್ರ್ಯ ಬಂದಾಗ ವಿದೇಶಗಳಿಂದ ಆಹಾರ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಬಳಿಕ ಕೃಷಿ ವಿಜ್ಞಾನಿಗಳ ಸಾಧನೆಯಿಂದಾಗಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲಾಯಿತು. ಹಸಿರು ಕ್ರಾಂತಿ ಹಾಗೂ ಕ್ಷೀರ ಕ್ರಾಂತಿ ವಿಜ್ಞಾನದ ಸಾಧನೆಯ ಫಲ ಎಂದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಮಾತನಾಡಿ, ಇತಿಹಾಸ ಸೇರಿದಂತೆ ಯಾವುದನ್ನು ಬೇಕಾದರೂ ತಿರುಚಬಹುದು. ಆದರೆ, ವಿಜ್ಞಾನವನ್ನು ತಿರುಚಲು ಆಗಲ್ಲ. ವಿಜ್ಞಾನ ಬೆಳೆದಂತೆ ದೇಶವೂ ಅಭಿವೃದ್ಧಿಯಾಗಲಿವೆ ಎಂದರು.
ಕೆಎಸ್ಒಯು ಹಂಗಾಮಿ ಕುಲಸಚಿವ ಡಾ.ಎ.ಖಾದರ್ ಪಾಷ, ಕೆಆರ್ವಿಪಿ ಅಧ್ಯಕ್ಷ ಗಿರೀಶ್ ಕಡ್ಲೆವಾಡ, ಪದಾಧಿಕಾರಿಗಳಾದ ಎಚ್.ಜಿ.ಹುದ್ದಾರ್, ದೊಡ್ಡಬಸಪ್ಪ, ಈ.ನಾಗರಾಜ್, ಬಿ.ಎನ್.ಶ್ರೀನಾಥ್, ಸಿ.ಕೃಷ್ಣೇಗೌಡ, ಸಮ್ಮೇಳನದ ರಾಜ್ಯ ಸಂಯೋಜಕ ಎ.ಎನ್.ಮಹೇಶ್ ಇನ್ನಿತರರು ಇದ್ದರು.