ದಾವಣಗೆರೆ: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ಭೂಷಣ್ ಶರಣ್ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪದಡಿ ದೆಹಲಿಯ ಜಂತರ್ ಮಂತರ್ನಲ್ಲಿ ಮಹಿಳಾ ಕುಸ್ತಿಪಟುಗಳು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಿಸಿ ಎಐಎಂಎಸ್ಎಸ್ ಹಾಗೂ ಎಐಡಿವೈಒ ಸಂಘಟನೆಗಳ ಕಾರ್ಯಕರ್ತರು ಶನಿವಾರ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಎಐಎಂಎಸ್ಎಸ್ ಜಿಲ್ಲಾ ಕಾರ್ಯದರ್ಶಿ ಕೆ.ಭಾರತಿ ಮಾತನಾಡಿ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸರ್ಕಾರ ಮೌನ ವಹಿಸಿರುವುದು ಸರಿಯಲ್ಲ. ಕೇಂದ್ರ ಸರ್ಕಾರ ಹೇಳಿದ ಬೇಟಿ ಬಚಾವೋ, ಬೇಟಿ ಪಢಾವೋ ಅಂದರೆ ಇದೆನಾ ಎಂದು ಪ್ರಶ್ನಿಸಿದರು.
ಕುಸ್ತಿಪಟುಗಳ ಕುಟುಂಬದವರಿಗೆ ಬೆದರಿಕೆ ಕರೆಗಳು ಬರುತ್ತಿವೆ. ಕೆಲ ಗೊಂಡಾಗಳು ತೋಳ್ಬಲ ಪ್ರದರ್ಶನ ಮಾಡುತ್ತಿದ್ದಾರೆ. ಕೂಡಲೆ ಆರೋಪಿಯನ್ನು ಬಂಧಿಸಿ, ಒಕ್ಕೂಟದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಕೆನರಾ ಬ್ಯಾಂಕ್ ಸ್ಟಾಫ್ ಫೆಡರೇಷನ್ನ ಸ್ಥಳೀಯ ಅಧ್ಯಕ್ಷ ಎಸ್.ಆರ್. ಹಿರೇಮಠ ಮಾತನಾಡಿ ಮಹಿಳಾ ಕ್ರೀಡಾಪಟು ಪಿಟಿ ಉಷಾ ಅವರ ಪ್ರತಿಕ್ರಿಯೆ ನೋವು ತರಿಸಿದೆ. ಕುಸ್ತಿಪಟುಗಳ ಹೋರಾಟಕ್ಕೆ ಫೆಡರೇಷನ್ ಬೆಂಬಲವಿದೆ ಎಂದು ಹೇಳಿದರು.
ಎಐಎಂಎಸ್ಎಸ್ನ ರಾಜ್ಯಾಧ್ಯಕ್ಷೆ ಬಿ.ಆರ್. ಅಪರ್ಣಾ ಮಾತನಾಡಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವವರೆಗೂ ಕುಸ್ತಿಪಟುಗಳು ಪಟ್ಟು ಸಡಿಲಿಸಬಾರದು. ಈ ಪ್ರಕರಣದಲ್ಲಿ ನಿದರ್ಶನೀಯ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಎಐಡಿವೈಒ ಜಿಲ್ಲಾ ಸಂಘಟನಾಕಾರ ಪರಶುರಾಂ, ಅನಿಲ್, ದಿಲೀಪ್, ಮನೋಜ್ಕುಮಾರ್, ಗುರು, ಹರಿಪ್ರಸಾದ್, ಶಶಿಕುಮಾರ್, ರಾಘವೇಂದ್ರ, ಎಸ್ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಮಂಜುನಾಥ್ ಕೈದಾಳೆ, ಮಂಜುನಾಥ್ ಕುಕ್ಕುವಾಡ, ಮಧು, ತೊಗಲೇರಿ, ನಾಗಜ್ಯೋತಿ, ಸ್ಮಿತಾ, ಲತಾ, ರತ್ನಮಾಲಾ, ಕವಿತಾ ಇತರರಿದ್ದರು.