ಚಿತ್ರದುರ್ಗ: ಕಾಡುಗೊಲ್ಲ ಸಮುದಾಯಕ್ಕೆ ಎನ್ಡಿಎ ಒಕ್ಕೂಟದಿಂದಲೇ ಪರಿಶಿಷ್ಟ ಪಂಗಡ ಮೀಸಲಾತಿ ಸೌಲಭ್ಯ ದೊರೆಯುವ ವಿಶ್ವಾಸವಿದೆ ಎಂದು ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾದ ನಂತರ ಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸುವ ಕುರಿತು ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಸೌಲಭ್ಯ ಸಿಗಬೇಕಾದರೆ, ಸಮುದಾಯ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕಿದೆ ಎಂದು ಮನವಿ ಮಾಡಿದರು.
ಸಮುದಾಯದ ಕೆಲ ಮುಖಂಡರು ನಮ್ಮವರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕಾಡುಗೊಲ್ಲರ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಸಮುದಾಯದ ಮುಖಂಡರಾದ ಎ.ವಿ.ಉಮಾಪತಿ, ಎ.ಕೃಷ್ಣಪ್ಪ ಸೇರಿ ಇತರರಿಗೆ 2013ರ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಟಿಕೆಟ್ ನೀಡಲಿಲ್ಲ. ಅಧಿಕಾರಕ್ಕೆ ಬಂದ ನಂತರ ಪ್ರಾತಿನಿಧ್ಯವನ್ನು ಕೊಡಲಿಲ್ಲ. ಸುಳ್ಳು ಹೇಳಿಕೆ ನೀಡುವ ಬದಲು ಅರ್ಹರಿಗೆ ಅಧಿಕಾರ ಕೊಡಿಸುವ, ಸಾಮಾಜಿಕ ನ್ಯಾಯ ನೀಡುವ ಕೆಲಸ ಕಾಂಗ್ರೆಸ್ನಲ್ಲಿ ಇರುವ ನಮ್ಮವರು ಏಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಸಂಘದ ಗೌರವಾಧ್ಯಕ್ಷ ಮೀಸೆ ಮಹಾಲಿಂಗಪ್ಪ, ಮುಖಂಡರಾದ ಉಮೇಶ್, ಅಜ್ಜಪ್ಪ, ವೆಂಕಟೇಶ್ ಯಾದವ್, ಆನಂದ್, ಕೃಷ್ಣಪ್ಪ, ಗೋವಿಂದಪ್ಪ, ಕೃಷ್ಣಮೂರ್ತಿ ಇತರರಿದ್ದರು.