ಮಳವಳ್ಳಿ: ತಾಲೂಕಿನ ಮೂಗನಕೊಪ್ಪಲು ಸಮೀಪ ಮಂಗಳವಾರ ರಾತ್ರಿ ಮಿನಿ ಗೂಡ್ಸ್ ಟೆಂಪೋದಲ್ಲಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಮೂರು ಹಸುಗಳನ್ನು ರಕ್ಷಿಸಿರುವ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ನಂಜನಗೂಡು ಮೂಲದ ಶ್ರೀಕಾಂತ್ ಬಂಧಿತ ಆರೋಪಿ. ಈತ ಮೈಸೂರು ಕಡೆಯಿಂದ ಪಟ್ಟಣದೆಡೆಗೆ ಗೂಡ್ಸ್ ಟೆಂಪೋದಲ್ಲಿ ಮೂರು ಹಸುಗಳನ್ನು ಹಾಕಿಕೊಂಡು ವೇಗವಾಗಿ ಬರುತ್ತಿದ್ದ. ಈ ವೇಳೆ ಹೆದ್ದಾರಿಯಲ್ಲಿ ಮುಂದೆ ಹೋಗುತ್ತಿದ್ದ ಕಾರಿಗೆ ಹಸುಗಳಿದ್ದ ಟೆಂಪೋ ಚಾಲಕ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆಯಬೇಕೆನ್ನುವಷ್ಟರಲ್ಲಿ ಕೂದಲೆಳೆಯಲ್ಲಿ ಅಂತರದಲ್ಲಿ ಅಪಘಾತ ತಪ್ಪಿತು. ಇದರಿಂದ ವಿಚಲಿತನಾದ ಕಾರು ಚಾಲಕ, ಟೆಂಪೋವನ್ನು ಅಡ್ಡಗಟ್ಟಿ ಎಚ್ಚರಿಕೆಯಿಂದ ಚಾಲನೆ ಮಾಡುವಂತೆ ಚಾಲಕ ಶ್ರೀಕಾಂತ್ಗೆ ಬುದ್ಧಿ ಹೇಳಲು ಮುಂದಾದಾಗ ಟೆಂಪೋದಲ್ಲಿ ಹಸುಗಳಿರುವುದನ್ನು ಗಮನಿಸಿ ಅನುಮಾನಗೊಂಡು ಹೈವೇ ಪೊಲೀಸರಿಗೆ ಮಾಹಿತಿ ನೀಡಿದರು.
ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮೂಗನಕೊಪ್ಪಲು ಸಮೀಪ ಚಾಲಕ ಶ್ರೀಕಾಂತ್ ನನ್ನು ಬಂಧಿಸಿ ಹಸುಗಳನ್ನು ರಕ್ಷಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.