ಹಾವೇರಿ: ಉನ್ನತ ಶಿಕ್ಷಣದ ಉತ್ಕೃಷ್ಟ ಬೆಳವಣಿಗೆಗೆ ಅಮೂಲ್ಯ ಕೊಡುಗೆ ನೀಡಿದ ಡಾ. ಡಿ.ಸಿ. ಪಾವಟೆ ಅವರ ದೂರದೃಷ್ಟಿಯ ಫಲವಾಗಿ ಕರ್ನಾಟಕ ವಿಶ್ವವಿದ್ಯಾಲಯ ನಾಡಿನ ಶ್ರೇಷ್ಠ ಮತ್ತು ಉತ್ಕೃಷ್ಟ ಸಾಮರ್ಥ್ಯದ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ ಎಂದು ಕವಿವಿ ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಡಾ. ಪ್ರಶಾಂತ ಎಚ್.ವೈ. ಹೇಳಿದರು.
ತಾಲೂಕಿನ ಕೆರಿಮತ್ತಿಹಳ್ಳಿಯಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ. ಡಿ.ಸಿ. ಪಾವಟೆ ಅವರ 123ನೇ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿ, ಮುಂಬೈ ಕರ್ನಾಟಕ ಶೈಕ್ಷಣಿಕ ರಂಗಕ್ಕೆ ಡಾ. ಪಾವಟೆ ಕೊಡುಗೆ ಅಪಾರವಾಗಿದೆ. ಮುಂಬೈ ಪ್ರಾಂತ್ಯದ ಪ್ರಮುಖ ಶೈಕ್ಷಣಿಕ ಸಂಸ್ಥೆಯಾದ ಕರ್ನಾಟಕ ವಿಶ್ವವಿದ್ಯಾಲಯದ ಸರ್ವಾಂಗೀಣ ಅಭಿವೃದ್ಧಿಗೆ ಭದ್ರ ಅಡಿಪಾಯ ಹಾಕಿದ್ದರು. ನಾಡಿನಾದ್ಯಂತ ಶೋಧ ನಡೆಸಿ, ಅತ್ಯುತ್ತಮ ಪ್ರಾಧ್ಯಾಪಕರನ್ನು ವಿಶ್ವವಿದ್ಯಾಲಯಕ್ಕೆ ಕರೆತಂದರು. ಇದರಿಂದಾಗಿ ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟ ಶ್ರೇಷ್ಠತೆಯಿಂದ ಕೂಡಿದ್ದನ್ನು ಸ್ಮರಿಸಬಹುದಾಗಿದೆ ಎಂದರು.
ಪ್ರಾಧ್ಯಾಪಕ ಡಾ. ವಿಶ್ವನಾಥ ಚಿಂತಾಮಣಿ, ಡಾ. ಚಿದಾನಂದ ಕಮ್ಮಾರ, ಪ್ರೊ. ವಿಜಯಕುಮಾರ ಕೆಲೂರ, ಡಾ. ಶಿವು ಭಜಂತ್ರಿ, ಡಾ. ಗೀತಾಂಜಲಿ ಕುರಡಗಿ, ಕಚೇರಿ ಅಧೀಕ್ಷಕ ಮಲ್ಲಿಕಾರ್ಜುನ ಚಿಕ್ಕುಂಬಿ ಮಾತನಾಡಿದರು.
ಪ್ರಕಾಶ ಮುಕಮ್ಮನವರ, ಡಾ. ದುಶ್ಯಂತ ಓಲೇಕಾರ, ಪ್ರೊ. ನೂರಲ್ಲಾ ಖಾದ್ರಿ, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಡಾ. ಕವಿತಾ ನಾಯ್ಕ ವಂದಿಸಿದರು.