ಬಾಗಲಕೋಟೆ: ಬೆಲೆ ನಿಗದಿ ಹಾಗೂ ಹಿಂದಿನ ವರ್ಷದ ಎರಡನೇ ಕಂತಿನ ಹಣ ಪಾವತಿಸದೇ ಕಾರ್ಖಾನೆ ಆರಂಭಿಸಬಾರದು ಎನ್ನುವ ರೈತರ ಬೇಡಿಕೆ ಕಡೆಗಣಿಸಿ ಕೆಲ ಫ್ಯಾಕ್ಟರಿಯವರು ಕಬ್ಬು ಕ್ರಷಿಂಗ್ ಆರಂಭಿಸಿದ್ದು ರೈತ ಸಂಘಟನೆ ಮುಖಂಡರನ್ನು ರೊಚ್ಚಿಗೆಬ್ಬಿಸಿದೆ.
ವಿರೋಧದ ನಡುವೆಯೂ ಕಾರ್ಖಾನೆಯಲ್ಲಿ ಕಬ್ಬು ಕ್ರಷಿಂಗ್ ನಡೆದಿದೆ ಎಂದು ಆರೋಪಿಸಿ ಜಮಖಂಡಿ ತಾಲೂಕಿನ ಸಿದ್ದಾಪುರ ಬಳಿ ಇರುವ ಪ್ರಭುಲಿಂಗೇಶ್ವರ ಕಾರ್ಖಾನೆ ಹತ್ತಿರ ರೈತರು ಪ್ರತಿಭಟನೆಗೆ ನಡೆಸಿದರು. ಮುಧೋಳ-ಜಮಖಂಡಿ ರಸ್ತೆ ತಡೆ ನಡೆಸಿದ ರೈತರು ಟೈಯರ್ಗಳಿಗೆ ಬೆಂಕಿ ಹಚ್ಚಿ ಕಾರ್ಖಾನೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಕ್ರಷಿಂಗ್ ಬಂದ ಮಾಡಬೇಕೆಂದು ಕಾರ್ಖಾನೆ ಕಡೆಗೆ ಹೆಜ್ಜೆ ಹಾಕಿದರು.
ಈ ವೇಳೆ ಕೆಲ ರೈತರು ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡುತ್ತಿರುವುದರಿಂದ ಅವರ ವಿರುದ್ದ ಆಕ್ರೋಶ ತಿರುಗಿ, ಕಬ್ಬು ಕೊಡಲು ಬಂದಿದ್ದ ರೈತನೊಬ್ಬನ್ನು ಕೆಲ ಪ್ರತಿಭಟನಾಕಾರರು ಥಳಿಸಿದ ಘಟನೆಯೂ ನಡೆಯಿತು. ಇದರಿಂದ ಸ್ಥಳದಲ್ಲಿ ತೀವ್ರಗೊಂದಲ, ಗದ್ದಲ ಏರ್ಪಟ್ಟಿತ್ತು. ಈ ವೇಳೆ ರೈತ ಮುಖಂಡರು, ಸ್ಥಳದಲ್ಲಿ ಪೊಲೀಸರು ಪರಿಸ್ಥಿತಿ ಶಮನಗೊಳಿಸಿದರು. ಆದರೆ, ಪ್ರತಿಭಟನಾರರು ಆಕ್ರೋಶಕ್ಕೆ ಮಣಿದು ಕಬ್ಬು ಪೂರೈಸಲು ಬಂದಿದ್ದ ಕೆಲ ರೈತರು ಅಲ್ಲಿಂದ ಕಾಲ್ಕಿತ್ತರು. ರಾತ್ರಿ ವರೆಗೂ ಪ್ರತಿಭಟನೆ ಇನ್ನು ಮುಂದುವರೆದಿತ್ತು. ಗಲಾಟೆ ವೇಳೆ ಎರಡು ವಾಹನಗಳು ಜಖಂ ಆಗಿವೆ. ಕಾರ್ಖಾನೆಗೆ ಬಂದಿರುವ ಕಬ್ಬು ವಾಹನಗಳನ್ನು ಹೊರಗೆ ಕಳುಹಿಸಿ ಮಾತುಕತೆ ಪೂರ್ಣವಾಗುವವರೆಗೂ ಕಬ್ಬು ಕ್ರಷಿಂಗ್ ನಡೆಸಬಾರದು ಎಂದು ರೈತರು ಒತ್ತಾಯ ಮಾಡಿದರು.
ಎರಡು ವಾಹನಗಳ ಗಾಜು ಪುಡಿಪುಡಿ :
ಕಬ್ಬು ಬೆಳೆಗಾರರ ಪ್ರತಿಭಟನೆ ರಾತ್ರಿಯಾದರೂ ಮುಂದುವರೆದಿತ್ತು. ಒಂದು ಕಡೆಗೆ ಕಬ್ಬು ಪೂರೈಸಲು ಮುಂದಾಗಿದ್ದ ಕೆಲವು ರೈತರ ವಿರುದ್ದ ಪ್ರತಿಭಟನಾಕಾರರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ರೈತರೊಬ್ಬರ ಮೇಲೆ ಹಲ್ಲೆಯೂ ನಡೆಯಿತು. ಆಗ ಗದ್ದಲ ಶಮನ ಮಾಡಲಾಯಿತಾದರೂ ಗಲಾಟೆಯಲ್ಲಿ ಎರಡು ವಾಹನ ಜಖಂ ಆಗಿವೆ. ವಾಹನಗಳ ಗ್ಲಾಸ್ ಗಳು ಪುಡಿಪುಡಿಯಾಗಿವೆ.