ಬೆಳಗಾವಿ: ಕರೊನಾ ಎರಡನೇ ಅಲೆ ವೇಗವಾಗಿ ಹರಡುತ್ತಿರುವ ಸಂದರ್ಭದಲ್ಲಿ ಎಲ್ಲ ಸಮುದಾಯಗಳು ಒಂದಾಗಿ ಸಂಕಷ್ಟ ಎದುರಿಸುವುದು ಅಗತ್ಯ ಎಂದು ಆರ್ಎಸ್ಎಸ್ ಉತ್ತರ ಕರ್ನಾಟಕದ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡೆ ಹೇಳಿದರು.
ನಗರದ ಮಹಾವೀರ ಭವನದಲ್ಲಿ ಜೈನ ಇಂಟರ್ನ್ಯಾಷನಲ್ ಟ್ರೇಡ್ ಆರ್ಗ್ನೈಜೇಷನ್ ಜೀತೋ ಸಂಸ್ಥೆ ಹಾಗೂ ಜೀತೋ ಸೋನಿಯಾಬಾಯಿ ಮಂಗಿಲಾಲ ಸಾಮಸುಖಾ ಹೆಲ್ತ್ ಕೇರ್ ವತಿಯಿಂದ ಆರಂಭಿಸಿರುವ ಜೀತೋ ಆಕ್ಸಿಜನ್ ಸಪೋರ್ಟ್ ಸೆಂಟರ್ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಸೋಂಕು ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಆರೋಗ್ಯ ಇಲಾಖೆ, ವೈದ್ಯರು ನಿಯಂತ್ರಣವಾಗಿ ಶ್ರಮಿಸುತ್ತಿದ್ದಾರೆ. ಅಲ್ಲದೆ, ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತಿವೆ. ಮತ್ತೊಂದೆಡೆ ಸರ್ಕಾರದ ಜತೆ ಸ್ವಯಂ ಪ್ರೇರಣೆಯಿಂದ ಕೈ ಜೋಡಿಸಿರುವ ಸಂಘ ಸಂಸ್ಥೆಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿವೆ ಎಂದರು.
ಆಕ್ಸಿಜನ್ ಸೆಂಟರ್ ಪ್ರೊಜೆಕ್ಟ್ ಕನ್ವೇನರ್ ವಿಕ್ರಮ ಜೈನ ಮಾತನಾಡಿ, ಈ ಕೇಂದ್ರದಲ್ಲಿ 15 ಹಾಸಿಗೆಗಳಿದ್ದು, ಆಕ್ಸಿಜನ್ ಕೊರತೆ ಎದುರಿಸುವ ಸೋಂಕಿತರಿಗೆ 5 ಗಂಟೆಗಳ ಕಾಲ ಆಕ್ಸಿಜನ್ ನೀಡುವ ವ್ಯವಸ್ಥೆ ಮಾಡಲಾಗಿದೆ. ಸ್ಥಳದಲ್ಲಿ ಅಂಬುಲೆನ್ಸ್ ಸೇವೆ, 24 ಗಂಟೆಗಳ ಕಾಲ ವೈದ್ಯಕೀಯ ಸೇವೆ, ಊಟದ ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲ ಸೇವೆಗಳು ಜೀತೋ ಸಂಸ್ಥೆಯ ವತಿಯಿಂದ ಉಚಿತವಾಗಿ ಮಾಡಲಾಗುತ್ತಿದೆ ಎಂದರು. ಶಾಸಕ ಅಭಯ ಪಾಟೀಲ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಪ್ರವೀಣಕುಮಾರ ಸಾಮಸುಖಾ, ಸಚಿನ ಪಾಟೀಲ, ಔಷಧ ಸಹಾಯಕ ನಿಯಂತ್ರಕ ಬಿರಾದಾರ, ಜೀತೋ ಬೆಳಗಾವಿ ವಿಭಾಗದ ಅಧ್ಯಕ್ಷ ಸುನೀಲ ಕಟಾರಿಯಾ, ಕಾರ್ಯದರ್ಶಿ ಅಂಕಿತ ಖೋಡಾ ಇತರರು ಇದ್ದರು.