ಹಿರಿಯೂರು(ಚಿತ್ರದುರ್ಗ): ತಾಲೂಕಿನ ಜವನಗೊಂಡನಹಳ್ಳಿ ಚೆಕ್ಪೋಸ್ಟ್ನಲ್ಲಿ ಪರಿಶೀಲನೆ ನಡೆಸುವ ವೇಳೆ ಅನಧಿಕೃತವಾಗಿ 1.44 ಕೋಟಿ ರೂ. ಸಾಗಿಸುತ್ತಿದ್ದ ಸಿಎಂಎಸ್ ಕಂಪನಿಯ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಹಸೀಲ್ದಾರ್ ರಾಜೇಶ್ ಕುಮಾರ್, ಸಿಪಿಐ ಕಾಳಿಕೃಷ್ಣ ನೇತೃತ್ವ ತಂಡ, ಹಣ ಜಪ್ತಿಮಾಡಿ ವಾಹನ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಪ್ರಗತಿಯಲ್ಲಿದೆ.
ಎಟಿಎಂಗಳ ಹಣ ನಿರ್ವಹಣೆ ಮಾಡುವ ಸಿಎಂಎಸ್ ಕಂಪನಿ ತುಮಕೂರಿನಿಂದ ಶಿರಾ ತಾಲೂಕಿನವರೆಗೆ ಮಾತ್ರ ಎಟಿಎಂಗಳಿಗೆ ಹಣ ತುಂಬಲು ಅನುಮತಿ ಪಡೆದಿತ್ತು. ಆದರೆ, ಶಿರಾ ತಾಲೂಕು ಹೊರತುಪಡಿಸಿ ಹಿರಿಯೂರು ತಾಲೂಕು ಗಡಿ ಪ್ರವೇಶಿಸಿದೆ. ಈ ಕುರಿತು ವಿಚಾರಿಸಿದಾಗ ಹಿರಿಯೂರು ಗಡಿ ಪ್ರವೇಶಿಸಿರುವುದು ಸಂಶಯ ಮೂಡಿಸಿದೆ.
ನೀತಿ ಸಂಹಿತೆ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಎಟಿಎಂಗಳಿಗೆ ಹಣ ತುಂಬಲು ಚಿತ್ರದುರ್ಗ ಜಿಲ್ಲಾಧಿಕಾರಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದ್ದರಿಂದ 1.44 ಕೋಟಿ ರೂ. ಹಾಗೂ ವಾಹನ ಜಪ್ತಿ ಮಾಡಿ ವಶಪಡಿಸಿಕೊಂಡಿವುದಾಗಿ ತಹಸೀಲ್ದಾರ್ ರಾಜೇಶ್ಕುಮಾರ್ ತಿಳಿಸಿದ್ದಾರೆ.
ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದು, ಸೂಕ್ತ ವಿಚಾರಣೆಯ ಬಳಿಕ ಜಿಪಂ ಸಿಇಒ ನೇತೃತ್ವದಲ್ಲಿ ನಗದು ಜಪ್ತಿ ಸಮಿತಿ ವಶಕ್ಕೆ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಗಾರ್ಮೆಂಟ್ಸ್ ವಸ್ತುಗಳ ವಶ
ಚಿತ್ರದುರ್ಗ: ಮಾದರಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ಮತ್ತು ಶನಿವಾರ ಜಿಲ್ಲೆಯ ವಿವಿಧೆಡೆ ಕಾರ್ಯಾಚರಣೆ ನಡೆಸಿ, 6,32,553 ರೂ. ಮೌಲ್ಯದ ಗಾರ್ಮೆಂಟ್ಸ್ನ 5479 ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ 62968 ರೂ. ಜಿಎಸ್ಟಿ ದಂಡ ವಸೂಲಿ ಮಾಡಿದ್ದಾರೆ.
*42 ಸಾವಿರ ಮೌಲ್ಯದ ಮದ್ಯ ವಶ: ಜಿಲ್ಲೆಯ ವಿವಿಧೆಡೆ ಪೊಲೀಸರು ಕಾರ್ಯಾಚರಣೆ ನಡೆಸಿ 42,105 ರೂ. ಮೌಲ್ಯದ 85.37 ಲೀಟರ್ ಮದ್ಯವಶ ಪಡಿಸಿಕೊಂಡಿದ್ದಾರೆ. ಈ ಸಂಬಂಧ 11 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಎಸ್ಪಿ ಧರ್ಮೆಂದರ್ಕುಮಾರ್ಮೀನಾ ತಿಳಿಸಿದ್ದಾರೆ.
*ದಾಖಲೆ ಇಲ್ಲದ 1.50 ಲಕ್ಷ ರೂ.ವಶ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.50 ಲಕ್ಷ ರೂ. ನಗದನ್ನು ತುರುವನೂರು ಹೋಬಳಿ ಚೆಕ್ಪೋಸ್ಟ್ನಲ್ಲಿ ಶನಿವಾರ ವಶಕ್ಕೆ ಪಡೆಯಲಾಗಿದೆ. ಎಫ್ಎಸ್ಟಿ ತಂಡದ ಮುಖ್ಯಸ್ಥ ಟಿ.ಕೆ.ಸಂತೋಷ್ಕುಮಾರ್, ವಾಹನಗಳ ತಪಾಸಣೆ ವೇಳೆ ಕೊಪ್ಪಳದ ಇರ್ಪಾನ್ಶೇಕ್ ಕಾರಿನಲ್ಲಿದ್ದ ನಗದನ್ನು ವಶಪಡಿಸಿಕೊಂಡಿದೆ.