ಹನೂರು: ತಾಲೂಕಿನ ಅಜ್ಜೀಪುರ ಸಮೀಪದ ಉಡುತೊರೆ ಜಲಾಶಯ ಭರ್ತಿಯಾದ ಹಿನ್ನೆಲೆ ಶುಕ್ರವಾರ ಶಾಸಕ ಆರ್.ನರೇಂದ್ರ ಬಾಗಿನ ಅರ್ಪಿಸಿದರು.
ಈ ಬಾರಿ ಉತ್ತಮ ಮಳೆಯಾದ್ದರಿಂದ ತಾಲೂಕು ವ್ಯಾಪ್ತಿಯ ರಾಮನಗುಡ್ಡೆ ಜಲಾಶಯ ಹೊರತುಪಡಿಸಿದರೆ ಇನ್ನುಳಿದ 8 ಜಲಾಶಯಗಳು ಭರ್ತಿಯಾಗಿವೆ. 17 ವರ್ಷಕ್ಕೆ ಹೋಲಿಸಿದರೆ ಉಡುತೊರೆ ಜಲಾಶಯ ಆಗಸ್ಟ್ ತಿಂಗಳಲ್ಲಿ ಭರ್ತಿಯಾಗಿರುವುದು ಇದೇ ಪ್ರಥಮ. ಈ ಜಲಾಶಯದಿಂದ 17500 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ವ್ಯವಸ್ಥೆ ಕಲ್ಪಿಲಾಗಿದೆ. ಆದರೆ ಸಮರ್ಪಕ ನಿರ್ವಹಣೆ ಕೊರತೆಯಿಂದ ಕಾಲುವೆಗಳಲ್ಲಿ ಹೂಳು ತುಂಬಿದ್ದು, ದುರಸ್ತಿಗೊಂಡಿವೆ. ಇದರಿಂದ ಈ ಭಾಗದಲ್ಲಿನ ಸುಮಾರು 3 ಸಾವಿರ ಹೆಕ್ಟೆರ್ ಪ್ರದೇಶಗಳಿಗೆ ಮಾತ್ರ ನೀರಾವರಿ ಸೌಲಭ್ಯ ಸಿಗುತ್ತಿದೆ. ಇನ್ನುಳಿದ ಪ್ರದೇಶಗಳ ಜಮೀನುಗಳಿಗೆ ನೀರಾವರಿ ಸೌಲಭ್ಯವಾಗುತ್ತಿಲ್ಲ. ಕಾಲುವೆಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ 15 ಕೊಟಿ ರೂ. ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೀಗಾಗಿ ಈ ಅನುದಾನ ದೊರೆತರೆ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಜಿ.ಪಂ. ಮಾಜಿ ಸದಸ್ಯ ಬಸವರಾಜು, ಗ್ರಾಪಂ ಅಧ್ಯಕ್ಷೆ ಸುಧಾ, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ವೆಂಕಟೇಶ್ ಪ್ರಭು, ಎಇಇಗಳಾದ ರಾಮಕೃಷ್ಣ, ರಮೇಶ್, ಎಇ ಗಳಾದ ನವೀನ್, ಕೃಷ್ಣ ಬಸವೇಶ್, ಮುಖಂಡರಾದ ಮಾದೇವ, ನಾಗರಾಜು, ಮಲ್ಲಿಕಾರ್ಜುನ ಹಾಗೂ ಇನ್ನಿತರರಿದ್ದರು.
ಹನೂರು ತಾಲೂಕಿನ ಅಜ್ಜೀಪುರ ಸಮೀಪದ ಉಡುತೊರೆ ಜಲಾಶಯ ಭರ್ತಿಯಾದ ಹಿನ್ನೆಲೆ ಶಾಸಕ ಆರ್.ನರೇಂದ್ರ ಬಾಗಿನ ಅರ್ಪಿಸಿದರು. ಬಸವರಾಜು, ವೆಂಕಟೇಶ್ ಪ್ರಭು, ಸುಧಾ ಇತರರು ಇದ್ದರು.